ADVERTISEMENT

ಬಾಲ್ಯವಿವಾಹ: ವರ, ಪೋಷಕರಿಗೆ 2 ವರ್ಷ ಜೈಲು

2016ರಲ್ಲಿ ನಡೆದ ಪ್ರಕರಣ: ಆರು ಮಂದಿ ವಿರುದ್ಧ ಮೊಕದ್ದಮೆ, ಇಬ್ಬರ ಖುಲಾಸೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 15:35 IST
Last Updated 3 ಜನವರಿ 2020, 15:35 IST
   

ಕೊಳ್ಳೇಗಾಲ: ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ, ಆತನ ಹಾಗೂ ವಧುವಿನ ಪೋಷಕರಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನಗರದ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ.

ಕೊಳ್ಳೇಗಾಲ ತಾಲ್ಲೂಕಿನ ಗುಂಡಿಮಾಳದ ಗ್ರಾಮದ ಮಹದೇವ, ಬಸಮ್ಮ ದಂಪತಿ, ವರ ಮಹದೇವಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು.

ಈ ಪೋಷಕರು 18 ವರ್ಷ ತುಂಬದ ಹೆಣ್ಣು ಮಗುವಿಗೆ 2016ರ ಮೇ 2ರಂದು ನಗರದ ಮಹದೇಶ್ವರ ಕಲ್ಯಾಣ ಮಂ‌ಟಪದಲ್ಲಿ ಮದುವೆ ಸಮಾರಂಭ ಏರ್ಪಡಿಸಿದ್ದರು.

ADVERTISEMENT

ಅಂದಿನ ಸಿಡಿಪಿಒ ಶೇಷಾದ್ರಿ ನೇತೃತ್ವದ ತಂಡ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ವಧು ಇನ್ನೂ ಬಾಲಕಿ ಎಂಬುದು ಗೊತ್ತಾಗಿತ್ತು.

ವರ ಹಾಗೂ ಮೂವರು ಪೋಷಕರು, ಕಲ್ಯಾಣ ಮಂಟಪದ ಮಾಲೀಕ ಸೋಮಣ್ಣ, ವಯಸ್ಸು ದೃಢೀಕರಣ ಮಾಡಿದ ನೋಟರಿ ವಕೀಲ ಕೃಷ್ಣ ವಿರುದ್ಧ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿರುವ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಜೆ.ಕೃಷ್ಣ ಅವರು ಕಲ್ಯಾಣ ಮಂಟಪ ಮಾಲೀಕರು ಹಾಗೂ ನೋಟರಿ ವಕೀಲರನ್ನು ಖುಲಾಸೆಗೊಳಿಸಿ, ಉಳಿದ ನಾಲ್ವರು ಅಪರಾಧಿಗಳು ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರೂಪಾಲಕ್ಷ್ಮಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.