
ಯಳಂದೂರು: ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ದಿಸೆಯಲ್ಲಿ ಮಕ್ಕಳ ಹಕ್ಕು ಬಾದ್ಯತೆಗಳ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗ್ರಾಮ ಪಂಚಾಯತಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯ ವರ್ಚುವಲ್ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಸಭೆಗಳಲ್ಲಿ ಭಾಗವಹಿಸುವುದರಿಂದ ಗ್ರಾಮ ಹಾಗೂ ಶಾಲೆಗಳ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮಕ್ಕಳ ಪ್ರತಿಭೆಗೂ ಅವಕಾಶ ಕಲ್ಪಿಸಬಹುದು. ವೇದಿಕೆಗಳನ್ನು ಮಕ್ಕಳ ಅರಿವು ಕೇಂದ್ರಗಳಾಗಿ ರೂಪಿಸಬಹುದು. ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಒಳಗೊಳ್ಳುವಂತೆ ಮಾಡುವುದರಿಂದ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಇಲಾಖೆಗಳು ಕಾರ್ಯಕ್ರಮಗಳನ್ನು ಮರು ರೂಪಿಸಲು ಸಾಧ್ಯವಾಗಲಿದೆ ಎಂದರು.
ಶಾಲೆ ಮತ್ತು ಕಾಲೇಜುಗಳಿಗೆ ರಾಜ್ಯ ಮತ್ತು ಕೇಂದ್ರಗಳಿಂದ ಹತ್ತಾರು ಯೋಜನೆಗಳ ನೆರವು ಬರುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚು ಆಸ್ಥೆ ವಹಿಸಿಬೇಕು. ಗುಣಮಟ್ಟದ ಆಹಾರ, ಸಮವಸ್ತ್ರ, ಶೂ ಹಾಗೂ ಪಠ್ಯಪುಸ್ತಕ ನೀಡಲಾಗುತ್ತಿದೆ ಎಂದರು.
ಸಮಸ್ಯೆಗಳನ್ನು ಬಿಡಿಸಿಟ್ಟ ಮಕ್ಕಳು: ಗ್ರಾಮೀಣ ಪ್ರದೇಶದ ಬರುವ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಬೇಕು. ಶಾಲೆಯ ಸುತ್ತುಗೋಡೆ ಪೂರ್ಣಗೊಳಿಸಬೇಕು, ಶಾಲೆಯ ಆವರಣದಲ್ಲಿ ಜಾನುವಾರು, ನಾಯಿ ಬರದಂತೆ ತಡೆಯಬೇಕು. ಶಾಲೆಯಲ್ಲಿ ನೀಡುವ ಹಾಲಿನ ಬದಲು ಮೊಸರು ಮಜ್ಜಿಗೆ ನೀಡಬೇಕು ಎಂದು ವಿದ್ಯಾರ್ಥಿಗಳಾದ ಮಹದೇವಿ ಮತ್ತು ಮಹೇಶ್ ಒತ್ತಾಯಿಸಿದರು.
ಗ್ರಾ.ಪಂ. ಅಧ್ಯಕ್ಷೆ ದೊಡ್ಡತಾಯಮ್ಮ. ಉಪಾಧ್ಯಕ್ಷೆ ಶೋಭಾ. ಎಸ್ಡಿಎಂಸಿ ಅಧ್ಯಕ್ಷ ನಾಗರಾಜು, ಗ್ಯಾರಂಟಿ ಯೋಜನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಚಂದ್ರು, ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಬಿಇಒ ಮಾರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತನುಜಾ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.