
ಚಾಮರಾಜನಗರ: ‘ಸಂವಿಧಾನ ಹಾಗೂ ನೆಲದ ಕಾನೂನುಗಳನ್ನು ಗೌರವಿಸಿ ಪರಿಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.
ತಾಲ್ಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘1949 ನ.26ರಂದು ಸಂವಿಧಾನ ಅಂಗೀಕಾರವಾಗಿದ್ದು 1950ರ ಜ.26ರಂದು ಜಾರಿಗೆ ತರಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮದಿಂದ ದೇಶಕ್ಕೆ ಉತ್ತಮ ಸಂವಿಧಾನ ದೊರೆತಿದೆ’ ಎಂದರು.
‘ಸಂವಿಧಾನದಲ್ಲಿ ಪ್ರಯೊಬ್ಬರಿಗೂ ಹಕ್ಕುಗಳನ್ನು ನೀಡಲಾಗಿದ್ದು, ಅವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜನರು ಹಕ್ಕುಗಳನ್ನು ಅನುಭವಿಸುವಂತೆ ಕರ್ತವ್ಯಗಳನ್ನೂ ಸರಿಯಾಗಿ ನಿರ್ವಹಿಸಬೇಕು’ ಎಂದರು.
ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ‘ಅಂಬೇಡ್ಕರ್ ವಿಶ್ವದ ಜ್ಞಾನ ಭಂಡಾರವಾಗಿದ್ದು ಅವರು ಕೊಟ್ಟ ಸಂವಿಧಾನ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಅವರ ವಿಚಾರಧಾರೆಗಳ ಅರಿವು ಪ್ರತಿಯೊಬ್ಬರಿಗೂ ಆಗಬೇಕಿದೆ’ ಎಂದರು.
ಜಿಲ್ಲಾ ಪಂಚಾಯಿತಿ ತರಬೇತಿ ಸಂಯೋಜಕ ಟಿ.ಜೆ.ಸುರೇಶ್ ಮಾತನಾಡಿ, ‘ಸಂವಿಧಾನ ಒಂದು ಸಮುದಾಯಕ್ಜೆ ಸೀಮಿತವಾಗದೆ ಸರ್ವರಿಗೂ ದಾರಿದೀಪವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಅರ್ಥೈಸಿಕೊಂಡು ಪರಿಪಾಲಿಸಬೇಕು’ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ತ್ರಿವೇಣಿ ಮಾತನಾಡಿ ‘ಮಹಿಳೆಯರು ಮತ್ತು ಮಕ್ಕಳಿಗೆ ನೀಡಿರುವ ಹಕ್ಕುಗಳನ್ನು ಅಗತ್ಯಬಿದ್ದಾಗ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶಿವನಂಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿರು. ಉಪನ್ಯಾಸಕರಾದ ಮೂರ್ತಿ, ಬಸವಣ್ಣ, ಸುರೇಶ್, ಕಾವ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.