ಈ ಬಾರಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದೆ. ಹೋದ ವರ್ಷ ನಮ್ಮ ಜಿಲ್ಲೆಯಲ್ಲಿ ಇಷ್ಟೊಂದು ಪ್ರಕರಣಗಳು ಬಂದಿರಲಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇದ್ದವು. ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡು ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿದೆ. ಆಮ್ಲಜನಕ ಸಹಿತ ಹಾಸಿಗೆಗಳಿಗೆ ಹೆಚ್ಚು ಬೇಡಿಕೆ ಇದೆ. ತುರ್ತು ಸಂದರ್ಭದಲ್ಲಿ ಹಾಸಿಗೆ ವ್ಯವಸ್ಥೆ ಮಾಡಲು ಕಷ್ಟಪಡಬೇಕಾಗಿದೆ. ಹಾಗಿದ್ದರೂ, ವೈದ್ಯರು, ಶುಶ್ರೂಷಕರು ಸೇರಿದಂತೆ ಎಲ್ಲ ಆರೋಗ್ಯ ಸಿಬ್ಬಂದಿ ಸೋಂಕಿತರಿಗೆ ಗುಣಮುಟ್ಟದ ಚಿಕಿತ್ಸೆ ನೀಡಲು ಮಿತಿ ಮೀರಿ ಪ್ರಯತ್ನಿಸುತ್ತಿದ್ದೇವೆ.
ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ತುಂಬಾ ಕಷ್ಟ. ಅದೂ ಬೇಸಿಗೆಯಲ್ಲಿ ಇನ್ನೂ ಕಷ್ಟ. ನಾವೇ ಸುಸ್ತಾಗಿ ಆಮ್ಲಜನಕ ಮಟ್ಟ ಕಡಿಮೆಯಾಗಿ ಕುಸಿದು ಬೀಳುವ ಪ್ರಸಂಗಗಳು ನಡೆಯುತ್ತವೆ. ನಮ್ಮ ಕೆಲವು ಸಿಬ್ಬಂದಿ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಎಷ್ಟು ಕಷ್ಟ ಇದ್ದರೂ, ನಮ್ಮ ಕರ್ತವ್ಯವನ್ನು ಮಾಡಲೇ ಬೇಕು. ನೂರಾರು ಜನರ ಪ್ರಾಣಗಳನ್ನು ಉಳಿಸುತ್ತಿದ್ದೇವೆ. ನರ್ಸ್ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಕುಟುಂಬದ ಸದಸ್ಯರ ಬೆಂಬಲ ಇಲ್ಲದಿದ್ದರೆ ಈ ಕೆಲಸ ಮಾಡಲು ಸಾಧ್ಯವಿಲ್ಲ.
ಕೋವಿಡ್ ಬಗ್ಗೆ ಆತಂಕ ಪಡುವಂತಹದ್ದೇನಿಲ್ಲ. ಧೈರ್ಯದಿಂದ ಎದುರಿಸಬೇಕು. ಜನರು ಹೆಚ್ಚು ಜಾಗ್ರತೆ ವಹಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಬೇಕು. ಆದಷ್ಟೂಮನೆಯಲ್ಲೇ ಇದ್ದು, ಸೋಂಕಿನ ಸರಣಿ ಮುರಿಯಲು ಎಲ್ಲರೂ ಸಹಕರಿಸಬೇಕು.
(ಉಷಾ ಅವರು ಸಂತೇಮರಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.