ADVERTISEMENT

ಜೀತದಾಳುಗಳಿಗೆ ಬಿಡುಗಡೆ ಪತ್ರಕ್ಕೆ ಆಗ್ರಹ; ಪ್ರತಿಭಟನಾ ಮೆರವಣಿಗೆ

ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 14:40 IST
Last Updated 23 ಆಗಸ್ಟ್ 2024, 14:40 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬಿಡುಗಡೆ ಪತ್ರ ಕೊಡಿಸುವಂತೆ ಒತ್ತಾಯಿಸಿ ರೂಟ್ ಫಾರ್ ಫ್ರೀಡಂ ಸಂಘಟನೆ ನೇತೃತ್ವದಲ್ಲಿ ಜೀತ ವಿಮುಕ್ತರು ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬಿಡುಗಡೆ ಪತ್ರ ಕೊಡಿಸುವಂತೆ ಒತ್ತಾಯಿಸಿ ರೂಟ್ ಫಾರ್ ಫ್ರೀಡಂ ಸಂಘಟನೆ ನೇತೃತ್ವದಲ್ಲಿ ಜೀತ ವಿಮುಕ್ತರು ಪ್ರತಿಭಟನೆ ನಡೆಸಿದರು   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ತನಿಖಾ ತಂಡಗಳ ಮೂಲಕ ವಿಚಾರಣೆ ಮಾಡಿ ವರದಿಯಾಗಿರುವ ಜೀತದಾಳುಗಳಿಗೆ ಬಿಡುಗಡೆ ಪತ್ರ ಕೊಡುವಂತೆ ಒತ್ತಾಯಿಸಿ ಜೀತ ವಿಮುಕ್ತರು, ರೂಟ್ಸ್ ಫಾರ್ ಫ್ರೀಡಂ ಸಂಘಟನೆ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಬೇಡ್ಕರ್ ಭವನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ಹಾಗು ಜೀತ ವಿಮುಕ್ತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು.

ರೂಟ್ ಫಾರ್ ಫ್ರೀಡಂ ಸಂಘಟನೆ ಜಿಲ್ಲಾ ಸಂಚಾಲಕ ಜಿ.ಕೆ.ಕುನ್ನಹೊಳಿಯಯ್ಯ ಮಾತನಾಡಿ, 2014ನೇ ಸಾಲಿನಲ್ಲಿ 50 ಮಂದಿ ಜೀತದಾಳುಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. 2015ರಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಡಿದ್ದ ತನಿಖಾ ತಂಡಗಳ ಅಭಿಪ್ರಾಯ ಮತ್ತು ನೋಡಲ್ ಅಧಿಕಾರಿಗಳ ಸಹಿಯೊಂದಿಗೆ ಜೀತದಾಳುಗಳು ಎಂದು ಪರಿಗಣಿಸಲಾಗಿದೆ. ತಾಲ್ಲೂಕಿನ 3 ಹೋಬಳಿಗಳ 6 ಗ್ರಾಮ ಪಂಚಾಯಿತಿಗಳಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿರುತ್ತಾರೆ. ಇದಾದ ನಂತರವೂ ಹಲವು ಪ್ರಕ್ರಿಯೆಗಳು ನಡೆದಿರುತ್ತವೆ. ಆದರೂ ಇದುವರೆಗೆ ಜೀತ ಮುಕ್ತರಿಗೆ ಬಿಡುಗಡೆ ಪತ್ರ ನೀಡಿಲ್ಲ ಎಂದರು.

ADVERTISEMENT

ಜೀತ ವಿಮುಕ್ತರು ದುಡಿಯುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಸಾಮಾಜಿಕ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಜೀತ ವಿಮುಕ್ತರಿಗೆ ಬಿಡುಗಡೆ ಪತ್ರ ಕೊಡಿಸಿಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದರು.

ಜೀತ ವಿಮುಕ್ತರಾದ ಗೋಪಾಲಯ್ಯ, ಮಲ್ಲು, ಶಿವಯ್ಯ, ನಾಗಯ್ಯ, ನಾಗರಾಜಸ್ವಾಮಿ, ಮಹದೇವಮ್ಮ ಸೇರಿದಂತೆ ಹಲವು ಮಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.