ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:56 IST
Last Updated 3 ಏಪ್ರಿಲ್ 2021, 15:56 IST
ಮಲ್ಲೇಶ್‌
ಮಲ್ಲೇಶ್‌   

ಚಾಮರಾಜನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರುರಮೇಶ್ ಜಾರಕಿಹೊಳಿ ಅವರ ಖಾಸಗಿ ಬದುಕನ್ನು ಚಿತ್ರೀಕರಣ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡಿ ನಾಚಿಕೆಗೇಡಿನ ಕೆಲಸ ಮಾಡಿದ್ದು, ಅವರನ್ನು ತಕ್ಷಣವೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಶನಿವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ರಮೇಶ್‌ ಜಾರಕಿಹೊಳಿ ಹಾಗೂ ಯುವತಿಯ ನಡುವೆ ಸಮ್ಮತಿಯ ಲೈಂಗಿಕ ಸಂಪರ್ಕ ನಡೆದಿದೆ. ಇದು ಸಿಡಿ ಹಾಗೂ ಅವರ ಸಂಭಾಷಣೆಯಿಂದ ಸಾಬೀತಾಗಿದೆ. ರಮೇಶ್‌ ಅವರು ಎಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಈ ವಿಷಯ ತಿಳಿದು ಡಿ.ಕೆ.ಶಿವಕುಮಾರ್ ಅವರು ಯುವತಿಯನ್ನು ಪುಸಲಾಯಿಸಿ, ಮಲಗುವ ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸುವಂತೆ ಮಾಡಿರುವುದು ಬಹಿರಂಗವಾಗಿದೆ. ಸಿಡಿಯ ನಿರ್ಮಾಪಕ ನಾನೇ ಎಂದು ಒಪ್ಪಿಕೊಂಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಾನೇ ನಿರ್ದೇಶಕಿ ಎಂದಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದರು.

‘ಶಿವಕುಮಾರ್ ಅವರು 25–30 ವರ್ಷಗಳ ಹಿಂದೆ ಕೊತ್ವಾಲ್‌ ರಾಮಚಂದ್ರನ ಸಹಚರರಾಗಿ, ರಾಮಕೃಷ್ಣ ಹೆಗಡೆ ಮೇಲೆ ದಾಳಿ ಮಾಡಲು ಯತ್ನಿಸಿ ಬಂಧನಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಅಕ್ರಮ ಸಂಪತ್ತಿನ ಆರೋಪದಲ್ಲಿ ಒಂದು ತಿಂಗಳು ಜೈಲಿನಲ್ಲಿ ಕಳೆದು ಬಂದಿದ್ದಾರೆ’ ಎಂದು ಹೇಳಿದರು.

ADVERTISEMENT

ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನಲ್ಲಿ ಇರುವವರೆಲ್ಲರೂ ಸತ್ಯ ಹರಿಶ್ಚಂದ್ರರೇ? ಎಲ್ಲರ ಮಲಗುವ ಕೊಠಡಿಯಲ್ಲಿ ಕ್ಯಾಮೆರಾ ಇಟ್ಟಿದ್ದರೆ ಬಹುತೇಕರು ಬೆತ್ತಲಾಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಮುಂದಿನ ದಿನಗಳಲ್ಲಿ ಡಿಕೆಶಿ ಹಠಾವೋ, ಕರ್ನಾಟಕ ಬಚಾವ್ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಹೈಕೋರ್ಟ್‌ನಲ್ಲಿ ಅರ್ಜಿ: ಸಿಡಿ ದೃಶ್ಯಾವಳಿಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿ ಅಸಹ್ಯವಾಗಿದ್ದು, ಇವುಗಳ ಪ್ರಸಾರಕ್ಕೆ ತಡೆ ನೀಡುವಂತೆ ಸೋಮವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಮಲ್ಲೇಶ್‌ ಅವರು ಹೇಳಿದರು.

ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ಮಹೇಶ್ , ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಚಂದ್ರು (ಬುಲೆಟ್), ಜಿಲ್ಲಾ ನಾಯಕ ಯುವಕರ ಸಂಘದ ಅಧ್ಯಕ್ಷ ಕಂಡಕ್ಟರ್ ಚಾ.ಸಿ.ಸೋಮನಾಯಕ, ಪ್ರಧಾನ ಕಾರ್ಯದರ್ಶಿ ಪರಶಿವನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.