ಯಳಂದೂರು: ತಾಲ್ಲೂಕಿನಾದ್ಯಂತ ಪುನರ್ವಸು ಮಳೆಯ ವೈಭವ ಕಾಡಿತು. ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣದ ನಡುವೆ ನೇಸರನ ಕಣ್ಣಾಮುಚ್ಚಾಲೆ ಆಟವೂ ನಡೆಯಿತು. ಈ ನಡುವೆ ಆಗಾಗ್ಗೆ, ಗಟ್ಟಿ ಮಳೆ, ಮತ್ತೊಮ್ಮೆ ಶೀತ ಗಾಳಿ, ಸೋನೆ ಮಳೆ ದಿನವಿಡೀ ಬಿಟ್ಟುಬಿಟ್ಟು ಸುರಿಯಿತು.
ಬಿಳಿಗಿರಿರಂಗನಬೆಟ್ಟದ ಪರಿಸರದಲ್ಲಿ ಮಂಜಿನ ಹೊದಿಕೆ ಹಾಸಿತ್ತು. ಇಲ್ಲಿನ ನಿವಾಸಿಗಳು ಕೊರೆಯುವ ಚಳಿಗೆ ತರಗುಟ್ಟಿದರು. ಮನೆಯಿಂದ ಹೊರ ಬಾರದೆ ದಿನ ನೂಕಿದರು. ವಾಹನ ಸವಾರರು, ಪ್ರವಾಸಿಗರು ಲೈಟ್ ಹಾಕಿಕೊಂಡು ವಾಹನ ಚಲಾಯಿಸಿದರು.
ಮೂರು ದಿನಗಳ ಹಿಂದೆ ಶುಚಿಗೊಳಿಸಿದ್ದ ಬಟ್ಟೆ ಇನ್ನೂ ಒಣಗುತ್ತಿಲ್ಲ. ಮನೆಯ ಚಾವಣಿಯಿಂದ ನೀರು ಹನಿಯುತ್ತಿದ್ದು, ಕೋಣೆಯೊಳಗೆ ಶೀತ ಹೆಪ್ಪುಗಟ್ಟಿದೆ. ನಿವಾಸಿಗಳಿಗೆ ತಲೆಶೋಲೆ, ನೆಗಡಿ, ಚಳಿ, ಜ್ವರ ಬಾಧಿಸಿದೆ ಎಂದು ಬೆಟ್ಟದ ನಿವಾಸಿಗಳು ಅಲವತ್ತುಕೊಂಡರು.
ಮಂಜಿನ ಚಾದರ ಹೊತ್ತ ಬೆಟ್ಟದ ನಡುವೆ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಎದುರು ಬರುವ ವಾಹನಗಳು ಕಾಣಿಸದಂತೆ ಸಣ್ಣ ಮಳೆ ಹನಿಯುತ್ತಿದೆ. ಎಚ್ಚರ ತಪ್ಪಿದರೆ ಅಪಾಯವೂ ಎದುರಾಗಲಿದೆ ಎಂದು ಚಾಲಕ ನಂಜೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.