ಚಾಮರಾಜನಗರ: ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾದ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಅಭಿಯಾನ ಕೈಗೊಂಡರು.
ನಗರದ ಭುವನೇಶ್ವರಿ ವೃತ್ತದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನರಿಗೆ ಡ್ರಗ್ಸ್ನಿಂದಾಗುವ ತೊಂದರೆಗಳು ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ಅವರು, ‘ರಾಜ್ಯದ ಹೆಸರು ಮತ್ತು ನೆಮ್ಮದಿ ಕೆಡಿಸುತ್ತಿರುವ ಡ್ರಗ್ಸ್ ದಂಧೆ ವಿರುದ್ಧ ದಿಟ್ಟ ಕ್ರಮಗಳನ್ನು ತೆಗೆದು ಕೊಳ್ಳುತ್ತಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಪೊಲೀಸರನ್ನು ಮೋರ್ಚಾವು ಅಭಿನಂದಿಸುತ್ತದೆ. ಮಾದಕ ವಸ್ತುಗಳ ಪಿಡುಗು ಇತ್ತೀಚೆಗೆ ರಾಜ್ಯದ ಯುವಜನತೆಯನ್ನು ಕಾಡುತ್ತಿರುವುದು ಬೇಸರದ ಸಂಗತಿ.ಯುವಜನತೆಯಷ್ಟೇ ಅಲ್ಲ. ಲಿಂಗಬೇಧವಿಲ್ಲದೆ ಎಲ್ಲ ವಯಸ್ಸಿನವರೂ ಡ್ರಗ್ಸ್ಗೆ ದಾಸರಾಗುತ್ತಿದ್ದಾರೆ’ ಎಂದರು.
‘ಮಾದಕ ವಸ್ತುಗಳ ಜಾಲ ಚಿತ್ರರಂಗ ಮಾತ್ರವಲ್ಲ, ಯುವ ಸಮೂಹವನ್ನೂ ಅಪ್ಪಿಕೊಂಡಿದೆ. ಹೀಗಾಗಿ, ಇದರ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮೋರ್ಚಾವು ಈ ಅಭಿಯಾನ ಹಮ್ಮಿಕೊಂಡಿದೆ’ ಎಂದರು.
ಜಿಲ್ಲಾ ಯುವಮೋರ್ಚದ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಕುಮಾರ್, ಲೋಕೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೃಷಭೇಂದ್ರಪ್ಪ, ಜಿಲ್ಲಾ ಕೊರ್ ಕಮಿಟಿ ಸದಸ್ಯರಾದ ಡಾ.ಎ.ಆರ್.ಬಾಬು, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಮರಿಯಾಲ ಮಹೇಶ್, ಮನು, ನೆಲ್ಲೂರು ಮಹೇಶ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ರಾಜ್ ಹೊಸೂರು, ರಘು, ಆನಂದ್ ಭಗೀರಥ, ಯರಗಂಬಳ್ಳಿ ಮಹೇಶ್, ಕಾಗಲವಾಡಿ ಪ್ರಮೋದ್, ಕೊಳ್ಳೇಗಾಲ ಕಿರಣ್, ಮಹದೇವ್ ಪ್ರಭು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.