
ಚಾಮರಾಜನಗರ: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ನೇತೃತ್ವದಲ್ಲಿ ಉದ್ಯೋಗಿಗಳು ನಗರದ ಸೆಸ್ಕ್ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
'ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಬಾರದು, ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಬಾರದು’ ಎಂದು ಅವರು ಘೋಷಣೆ ಕೂಗಿದರು.
ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ‘ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದರ ವಿರುದ್ದ ಆಲ್ ಇಂಡಿಯಾ ಎಂಜಿನಿಯರ್ ಒಕ್ಕೂಟ ಹಾಗೂ ಹಲವು ಸಂಘಗಳು ಒಂದು ದಿನದ ಮುಷ್ಕರ ಮಾಡುತ್ತಿರುವುದನ್ನು ಬೆಂಬಲಿಸಿ ನೌಕರರ ಸಂಘದಿಂದಲೂ ಪ್ರತಿಭಟನೆ ಮಾಡಿದ್ದೇವೆ’ ಎಂದರು.
‘ವಿದ್ಯುತ್ ಸುಧಾರಣಾ ಕಾಯ್ದೆ–2026 ಜಾರಿಯಾದರೆ ಗ್ರಾಹಕರಿಗೆ ಹಾಗೂ ನೌಕರರ ವರ್ಗಕ್ಕೆ ಮಾರಕವಾಗಲಿದ್ದು, ಕಾರ್ಮಿಕ ವಿರೋಧಿ ನೀತಿಯನ್ನು ಸರ್ಕಾರ ಜಾರಿ ಮಾಡಬಾರದು. ಪರಿಷ್ಕೃತ ಕಾಯ್ದೆ ಜಾರಿಯಾದರೆ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಉಚಿತ ವಿದ್ಯುತ್ ಕಡಿತದ ಸಾಧ್ಯತೆಗಳು ಇವೆ. ಬಡವರಿಗೆ ಉಚಿತ ವಿದ್ಯುತ್ ನಿಲುಗಡೆ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ₹ 60,000ಕ್ಕೂ ಹೆಚ್ಚು ನೌಕರರು ಹಾಗೂ ಸಿಬ್ಬಂದಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು , ಕಾಯ್ದೆ ಜಾರಿಯಿಂದ 40 ಸಾವಿರ ಪಿಂಚಣಿದಾರರಿಗೆ ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು’ ಎಂದು ಆಗ್ರಹಿಸಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್, ಎಇಇ ಮಹೇಶ್, ನೌಕರರ ಸಂಘದ ಅಧ್ಯಕ್ಷ ಮುರುಳಿ ಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಎಸ್ಸಿ ಎಸ್ಟಿ ಕಲ್ಯಾಣ ಸಂಸ್ಥೆ, ಕೇಂದ್ರ ಸಮಿತಿ ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ, ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.