ಗುಂಡ್ಲುಪೇಟೆ: ತಾಲ್ಲೂಕಿನ ಕೋಡಹಳ್ಳಿ ಮಹದೇಶ್ವರ ದೇವಸ್ಥಾನ ಸಮೀಪ ಹುಲಿ ರಸ್ತೆ ದಾಟುವುದನ್ನು ಕಂಡ ವಾಹನ ಸವಾರರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕೋಡಹಳ್ಳಿ ಮಾರ್ಗವಾಗಿ ಬೈಕ್ನಲ್ಲಿ ಸಾಗುತ್ತಿದ್ದ ಬೊಮ್ಮಲಾಪುರ ಗ್ರಾಮದ ಗ್ರಾ.ಪಂ. ಸದಸ್ಯ ಗೋವಿಂದ ನಾಯಕ, ನಂದೀಶ್ ಸೇರಿದಂತೆ ಹಲವರು ಹುಲಿ ರಸ್ತೆ ದಾಟುವುದನ್ನು ಕಂಡು ವಾಹನಗಳನ್ನು ಹಿಂದೆ ತಿರುಗಿಸಿದ್ದಾರೆ. ತಕ್ಷಣ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಕೆಲ ಸಮಯದ ಬಳಿಕ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ.
ಹುಲಿ ಕೋಡಹಳ್ಳಿ ಮಾರ್ಗವಾಗಿ ಹುಲ್ಲೆಪುರ, ಬೊಮ್ಮಲಾಪುರ ಮಾರ್ಗವಾಗಿ ತೆರಳಿರಬಹುದು ಎನ್ನಲಾಗುತ್ತಿದ್ದು, ಕಳೆದ ಹಲವು ದಿನಗಳಿಂದ ಬೊಮ್ಮಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಉಪಟಳ ಕೊಡುತ್ತಿರುವ ಹುಲಿ ಇದೆ ಆಗಿರಬಹುದು ಎಂಬ ಶಂಕೆಯೂ ಕೂಡ ಸ್ಥಳೀಯರಲ್ಲಿ ಮೂಡಿದೆ.
ಹಸು ಕೊಂದಿದ್ದ ಹುಲಿ: ಸೆ.6ರಂದು ಪಟ್ಟಣದ ವಿಜಯಪುರ ಅಮಾನಿಕೆರೆ ಅಂಗಳದಲ್ಲಿ ನಾಗರಾಜನಾಯಕ ಎಂಬ ರೈತನ ಹಸು ಹುಲಿ ದಾಳಿಯಿಂದ ಸಾವನ್ನಪ್ಪಿತ್ತು. ಆ ಹಸುವನ್ನು ಇದೇ ಹುಲಿ ಕೊಂದಿರಬಹುದು ಎಂಬ ಅನುಮಾನ ಮೂಡಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಹುಲಿ ಸೆರೆಗೆ ಕ್ರಮ ವಹಿಸಬೇಕೆಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.