ADVERTISEMENT

ಯಳಂದೂರು: ಹೈಬ್ರಿಡ್ ಬಿತ್ತನೆಯತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:37 IST
Last Updated 17 ಸೆಪ್ಟೆಂಬರ್ 2025, 2:37 IST
<div class="paragraphs"><p>ಯಳಂದೂರು ತಾಲ್ಲೂಕಿನ ಹೋಬಳಿ ವ್ಯಾಪ್ತಿಗಳಲ್ಲಿ ನೀರಾವರಿ ಭೂಮಿಯಲ್ಲಿ ಹೈಬ್ರಿಡ್ ತಳಿಯ ರಾಗಿ ನಾಟಿ ಮಾಡಿರುವುದು</p></div>

ಯಳಂದೂರು ತಾಲ್ಲೂಕಿನ ಹೋಬಳಿ ವ್ಯಾಪ್ತಿಗಳಲ್ಲಿ ನೀರಾವರಿ ಭೂಮಿಯಲ್ಲಿ ಹೈಬ್ರಿಡ್ ತಳಿಯ ರಾಗಿ ನಾಟಿ ಮಾಡಿರುವುದು

   

ಯಳಂದೂರು: ತಾಲ್ಲೂಕಿನಲ್ಲಿ ಮಳೆ ಕೊರತೆ ರೈತರನ್ನು ಭಾದಿಸಿದ್ದು, ವಿಶೇಷವಾಗಿ ಮುಂಗಾರು ಹಂಗಾಮಿನಲ್ಲಿ ರಾಗಿ ನಾಟಿ ಸಿದ್ಧತೆ ಮಾಡಿದ್ದ ರೈತರು ಉತ್ತಮ ಮಳೆ ನಿರೀಕ್ಷೆಯಲ್ಲಿ ಇದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರಾಗಿ, ಮೆಕ್ಕೆಜೋಳ ಬೆಳೆಗಾರರು ವರುಣನತ್ತ ದೃಷ್ಟಿ ನೆಟ್ಟಿದ್ದಾರೆ. ಅಲ್ಲದೇ ಕಡಿಮೆ ಮಳೆಯಾದರೂ ಹೆಚ್ಚು ಇಳುವರಿ ಬರುವ ಹೈಬ್ರಿಡ್ ಬೆಳೆಯತ್ತ ರೈತರು ಚಿತ್ತ ಹರಿಸಿದ್ದಾರೆ.

ತಾಲ್ಲೂಕಿನಲ್ಲಿ ಕೊಳವೆಬಾವಿ ಮತ್ತು ಕಾಲುವೆ ನೀರಿನ ಆಸರೆಯಲ್ಲಿ ಭತ್ತ, ಬಾಳೆ, ಕಬ್ಬು ಬೆಳೆಯಲಾಗಿದೆ. ಕಸಬಾ ಮತ್ತು ಅಗರ ಹೋಬಳಿಗಳಲ್ಲಿ ಇನ್ನೂ ಬಿತ್ತನೆ ಚಟುವಟಿಕೆ ನಡೆದಿದೆ. ಆದರೆ, ಕಾಡಂಚಿನ ಪ್ರದೇಶ ಹಾಗೂ ಪೋಡುಗಳ ಸುತ್ತಮುತ್ತ ರಾಗಿ ಸಾಗುವಳಿ ಮಾಡಿದ್ದು, ವಾರಾಂತ್ಯದಲ್ಲಿ ಮಳೆ ಕೈಹಿಡಿಯುವ ನಿರೀಕ್ಷೆಯಲ್ಲಿ ಇದ್ದಾರೆ ಅನ್ನದಾತರು.

ADVERTISEMENT

ಅರೆ ನೀರಾವರಿ ಪ್ರದೇಶ ಹಾಗೂ ಹೋಬಳಿ ವ್ಯಾಪ್ತಿಗಳಲ್ಲಿ ಕೆಲ ಕಡೆ ರಾಗಿ ಸಸಿ ನಾಟಿ ಮಾಡುವ ಪರಿಪಾಠ ಇದೆ. ನಾಟಿಗೆ ಅಗತ್ಯ ಸಸಿ ಮಡಿ ಹಾಗೂ ತಿಂಗಳ ಬೆಳೆ ಉಳಿಸಿಕೊಳ್ಳಲು ಮಳೆಯ ಅಗತ್ಯವಿದ್ದು, ರಾಗಿ ಬಿತ್ತನೆ ಆರಿದ್ರಾ ಮಳೆಯಿಂದ ಆರಂಭಿಸಿ, ಪುಷ್ಯ ಮಳೆಗಾಲ ತನಕ ಯೋಗ್ಯವಾಗಿದೆ. ಈಗ ಉತ್ತರ ಮಳೆ ರೈತರ ಕೈಹಿಡಿಯುವ ಆಶಾಭಾವ ಮೂಡಿಸಿದೆ. ಒಂದು ವಾರದೊಳಗೆ ವರ್ಷಧಾರೆಯಾದರೆ ರೈತರಿಗೆ ಉತ್ತಮ ಬೆಳೆ ಕೈಸೇರಲಿದೆ.

‘ಕಳೆದ ವರ್ಷ ಇದೇ ಸಮಯದಲ್ಲಿ ಸೋನೆ ಮಳೆ ಸುರಿದು ಶೇ 30ರಷ್ಟು ಹೆಚ್ಚು ಮಳೆಯಾಗಿತ್ತು. ಈ ಬಾರಿ ಆಗಸ್ಟ್ ಅಂತ್ಯದ ತನಕ 80ರಿಂದ 100 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ತುಂತುರು ಮಳೆ ಬಿಟ್ಟರೆ, ವ್ಯವಸಾಯಕ್ಕೆ ಪೂರಕವಾದ ಮಳೆ ಕಂಡುಬಂದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಮಾನ್ಯ ಮಳೆ ಬೀಳುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

350 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ

ತಾಲ್ಲೂಕಿನ 10.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಇದ್ದು ಭತ್ತ ಕಬ್ಬು ಮತ್ತು ಮುಸುಕಿನ ಜೋಳ ತಾಕು ಶೇ 60ರಷ್ಟು ಭಾಗವನ್ನು ಆಕ್ರಮಿಸಿದೆ. 350 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ನಾಟಿ ನಡೆದಿದ್ದು ಕೆಲ ಬೇಸಾಯಗಾರರು 30 ದಿನಗಳ ಹಿಂದೆ ಎಂಎಲ್ 365 ಜಿಪಿಯೂ 28 ತಳಿಯ ರಾಗಿ ಬಿತ್ತನೆ ಮಾಡಿದ್ದು ಗುಣಮಟ್ಟದ ಇಳುವರಿ ಮತ್ತು ಮೇವು ಸಂಗ್ರಹಿಸುವತ್ತ ಮಧ್ಯಂತರ ಕಾಯಕ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಮೇಲುಗೊಬ್ಬರ ಕೊಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಬೇಕು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು. v

ಮಳೆ ಸಮೃದ್ಧವಾಗಿ ಸುರಿದರೆ ಹೆಚ್ಚುವರಿ ಫಸಲನ್ನು ಮಾರಾಟ ಮಾಡುತ್ತಾರೆ. ಈ ಸಲ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದು ಹಸ್ತ ಮಳೆ ರೈತರನ್ನು ಕೈಹಿಡಿಯುವ ನಿರೀಕ್ಷೆ ಇದೆ
ವೆಂಕಟೇಶ್‌ ಅಗರ, ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.