ಚಾಮರಾಜನಗರ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶರವಣನ್ ವರ್ಗಾವಣೆ ಮಾಡದಿರುವ ಕ್ರಮ ಖಂಡಿಸಿ, ಜಿಲ್ಲಾಡಳಿತ ಭವನದ ಎದುರು ರೈತರು 10ನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದು, ಬುಧವಾರ ತಮಟೆ ಚಳವಳಿ ನಡೆಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರವಾಗಿ ಕೆಲಸ ಮಾಡದೆ ಕೇವಲ ಕಾರ್ಖಾನೆ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಶಾಸಕರು ಹಾಗೂ ಮಾಜಿ ಶಾಸಕರು ಕಾರ್ಖಾನೆಯ ಗುಲಾಮರಾಗಿದ್ದಾರೆ. ಕಾರ್ಖಾನೆ ಪರವಾಗಿ ಹೇಳಿಕೆ ಕೊಡಲಿ, ಇಲ್ಲ ರೈತರ ಪರವಾಗಿದ್ದರೆ ರೈತರ ಪರವಾಗಿ ಹೇಳಿಕೆ ಕೊಡಲಿ. ಸಕ್ಕರೆ ಕಾರ್ಖಾನೆಯು ರೈತರ ಮೇಲೆ ರೈತರನ್ನೇ ಎತ್ತಿ ಕಟ್ಟುವ ಪ್ರಯತ್ನ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಎಸ್ಡಿಪಿಐ ಬೆಂಬಲ: ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟನನಿರತರಿಗೆ ಮಜ್ಜಿಗೆ ವಿತರಿಸಿ ಬೆಂಬಲ ಸೂಚಿಸಿದರು.
ಕಮರವಾಡಿ ಶಿವಸ್ವಾಮಿ, ಶಂಕರಪ್ಪ, ಹೊನ್ನೂರು ಮಹದೇವಸ್ವಾಮಿ, ಹಾಡ್ಯ ರವಿ, ಕುರುಬೂರು ಮಂಜು, ಮೂಡ್ಲುಪುರ ನಾಗರಾಜ್, ಮೂಕಹಳ್ಳಿ ಮಹದೇವಸ್ವಾಮಿ, ಉಮ್ಮತ್ತೂರು ಚಿಕ್ಕಬಸಪ್ಪ, ಕಟ್ನವಾಡಿ ರಮೇಶ್, ಮಲೆ ಮಾದಪ್ಪ, ಕಲ್ಪುರ ಪುಟ್ಟಪ್ಪ, ರಘು, ನಾಗೇಂದ್ರ, ನಾಗರಾಜು, ಪಾಪು, ದೇಸಿಗೌಡನಪುರ ಮಾದಪ್ಪ, ಹೆಗ್ಗೋಠಾರ ಶಿವಸ್ವಾಮಿ, ಕುಂತೂರ್ ನಂಜುಂಡಸ್ವಾಮಿ, ಪಿ.ಸೋಮಶೇಖರ್, ಬೆನಕಹಳ್ಳಿ ಪರಶಿವಮೂರ್ತಿ ಹಾಗೂ ಕಮರವಾಡಿ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.