ADVERTISEMENT

ರೈತರ ಹೋರಾಟ ಬೆಂಬಲಿಸಿ ಚಾಮರಾಜನಗರದಲ್ಲೂ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:05 IST
Last Updated 26 ಜನವರಿ 2021, 16:05 IST
ಪ್ರಧಾನಿ ಮೋದಿ ಅವರ ಅಣಕು ಶವಯಾತ್ರೆ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು
ಪ್ರಧಾನಿ ಮೋದಿ ಅವರ ಅಣಕು ಶವಯಾತ್ರೆ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು   

ಚಾಮರಾಜನಗರ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ, ಮಂಗಳವಾರ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆದ ರೈತರ ಬೃಹತ್‌ ರ‍್ಯಾಲಿಯನ್ನು ಬೆಂಬಲಿಸಿ, ನಗರದಲ್ಲೂ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ರ‍್ಯಾಲಿ ನಡೆಸಿದರು.

ನಗರದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ರೈತ ಮುಖಂಡರು ಹಾಗೂ ಕಾರ್ಯಕರ್ತರು,ರ‍್ಯಾಲಿಗೂ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

ಕೇಂದ್ರದ ನಡೆಯನ್ನು ಕಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಅಣಕು ಶವಯಾತ್ರೆ ಮಾಡಲು ಸಿದ್ಧತೆ ನಡೆಸಿದರು. ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಶವದ ಪ್ರತಿಕೃತಿಯನ್ನು ವಶಕ್ಕೆ ಪಡೆದರು. ಶಾಂತಿಯುತವಾಗಿ ರ‍್ಯಾಲಿ ನಡೆಸಲು ಅವಕಾಶ ನೀಡುವುದಾಗಿ ಹೇಳಿದರು.

ADVERTISEMENT

ಪ್ರವಾಸಿಮಂದಿರದಿಂದ ರ‍್ಯಾಲಿ ಹೊರಟ ಪ್ರತಿಭಟನಕಾರರು. ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ ಮೂಲಕ ಸಂತೇಮರಹಳ್ಳಿ ವೃತ್ತಕ್ಕೆ ತೆರಳಿ ಅಲ್ಲಿ ಕೆಲಸ ಕಾಲ ಪ್ರತಿಭಟನೆ ನಡೆಸಿದರು. ಅಲ್ಲಿಂದ ಚಿಕ್ಕಂಗಡಿ ಬೀದಿ, ಶ್ರೀಚಾಮರಾಜೇಶ್ವರ ದೇವಸ್ಥಾನದ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ‌

‌‌‌ರ‍್ಯಾಲಿಯ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮುಖಂಡರಾದ ವಿಜಿ ಹೆಗ್ಗೋಠಾರ, ಪೃಥ್ವಿ, ಮಾಡ್ರಹಳ್ಳಿ ಮಹದೇವಪ್ಪ, ಶಿವಕುಮಾರ್, ಮಹೇಶ್, ದಡದಹಳ್ಳಿ ಷಣ್ಮುಗಸ್ವಾಮಿ, ಗುರು, ರಘು, ಮಹೇಶ ಇತರರಿದ್ದರು.‌

ಬೆಂಗಳೂರು ರ‍್ಯಾಲಿಯಲ್ಲಿ ಭಾಗಿ

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ನೇತೃತ್ವದ ಒಂದು ತಂಡ ಬೆಂಗಳೂರಿನಲ್ಲಿ ನಡೆದ ರೈತರ ರ‍್ಯಾಲಿಯಲ್ಲಿ ಭಾಗವಹಿಸಿತು. ‌

ಜಿಲ್ಲೆಯಿಂದ 10 ವಾಹನಗಳಲ್ಲಿ ರೈತರು ಹೋಗಿದ್ದರು. ಹೊನ್ನೂರು ಬಸವಣ್ಣ, ಕಡಬೂರು ಮಂಜುನಾಥ್‌, ಅಂಬಳೆ ಶಿವಕುಮಾರ್‌, ಆಲಳ್ಳಿ ಮಹೇಶ್‌, ಸಂಪತ್ತು, ಅಂಬೆಳೆ ಬಸವಣ್ಣ, ಪಾಳ್ಯದ ರಘು, ಕಂದೇಗಾಲ ವೃಷಬೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.