ADVERTISEMENT

ಚಾಮರಾಜನಗರ: ಓಮ್ನಿ ಕಾರಿನ ಮೇಲೆ ಬಿದ್ದ ಆಲದ ಮರ, ತಂದೆ - ಮಗ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 14:28 IST
Last Updated 5 ಆಗಸ್ಟ್ 2022, 14:28 IST
ಮಾರುತಿ ಓಮ್ನಿ ಮೇಲೆ ಆಲದ ಮರ ಬಿದ್ದಿರುವುದು
ಮಾರುತಿ ಓಮ್ನಿ ಮೇಲೆ ಆಲದ ಮರ ಬಿದ್ದಿರುವುದು   

ಸಂತೇಮರಹಳ್ಳಿ (ಚಾಮರಾಜನಗರ):ಹೋಬಳಿಯ ಕುದೇರು ಮುಖ್ಯರಸ್ತೆಯಲ್ಲಿ ಶುಕ್ರವಾರ ಸಂಜೆ ಬೃಹತ್‌ ಆಲದ ಮರವೊಂದು ಸಂಚರಿಸುತ್ತಿದ್ದ ಮಾರುತಿ ಓಮ್ನಿ ಮೇಲೆ ಬಿದ್ದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೋಬಳಿಯ ಹೆಗ್ಗವಾಡಿಪುರದ ಗ್ರಾಮದ ಎಚ್‌.ಪಿ.ರಾಜು (49) ಹಾಗೂ ಅವರ ಮಗ ಶರತ್(15) ಮೃತಪಟ್ಟವರು.

ಸಂತೇಮರಹಳ್ಳಿಯಲ್ಲಿ ವಾಸವಿದ್ದ ಇವರು, ಸಗಟು ದರದಲ್ಲಿ ಅಂಗಡಿಗಳಿಗೆ ವಸ್ತುಗಳನ್ನು ಪೂರೈಸುತ್ತಿದ್ದರು.

ADVERTISEMENT

ಶುಕ್ರವಾರ ಸಂಜೆ ಆರು ಗಂಟೆ ಸುಮಾರಿಗೆ ಸಂತೇಮರಹಳ್ಳಿಯಿಂದ ಕುದೇರಿನತ್ತ ಓಮ್ನಿಯಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಹೆಗ್ಗವಾಡಿಪುರ ಕೆರೆ ಬಳಿ ಇದ್ದ ಬೃಹತ್‌ ಆಲದ ಮರ ಓಮ್ನಿ ಮೇಲೆ ಬಿದ್ದಿದೆ. ಓಮ್ನಿ ನಜ್ಜುಗುಜ್ಜಾಗಿದ್ದು, ಅದರ ಮಧ್ಯೆ ಸಿಕ್ಕಿಕೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು.

ಸಾಯುವ ಸ್ಥಿತಿಯಲ್ಲಿದ್ದ ಆಲದ ಮರ ಇತ್ತೀಚೆಗೆ ಚಿಗುರೊಡೆದಿತ್ತು. ನಿರಂತರ ಗಾಳಿ ಮತ್ತು ಮಳೆಯಿಂದಾಗಿ ಮರದ ಬುಡ ದುರ್ಬಲವಾಗಿತ್ತು. ಶುಕ್ರವಾರ ಮಳೆ ಇಲ್ಲದಿದ್ದರೂ, ವೇಗವಾಗಿ ಗಾಳಿ ಬೀಸುತ್ತಿತ್ತು.

ಮಾರ್ಚ್‌ ತಿಂಗಳಲ್ಲಿ ‘ಪ್ರಜಾವಾಣಿ’ಯ ಓದುಗರೊಬ್ಬರು ಕುಂದುಕೊರತೆ ಅಂಕಣದಲ್ಲಿ ಇದೇ ಮರವನ್ನು ಉಲ್ಲೇಖಿಸಿ, ‘ಅಪಾಯಕಾರಿ ಆಲದ ಮರವನ್ನು ತೆರವುಗೊಳಿಸಿ’ ಎಂದು ಮನವಿ ಮಾಡಿ ಬರೆದಿದ್ದರು.

ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಆಲದ ಮರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.