ಚಾಮರಾಜನಗರ: ಸಂಕ್ರಾಂತಿ ಹಬ್ಬ ಸಮೀಪಿಸುತ್ತಿರುವಂತೆಯೇ ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವು ತರಕಾರಿಗಳು ತುಟ್ಟಿಯಾಗಿವೆ. ಹಣ್ಣುಗಳು, ಮಾಂಸ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಎಲ್ಲ ಹೂವುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ₹400-₹500ರಷ್ಟಿದ್ದ ಕೆಜಿ ಕನಕಾಂಬರದ ಬೆಲೆ ಈ ವಾರ ₹600 ತಲುಪಿದೆ.
ಕಾಕಡದ ದರ ₹160ರಿಂದ ₹320ಕ್ಕೆ ಏರಿದೆ. ಚೆಂಡು ಹೂವಿನ ಬೆಲೆ ₹50ಕ್ಕೆ ಏರಿದೆ. ಸುಂಗಧರಾಜಕ್ಕೆ ಕೆಜಿಗೆ ₹120 ಆಗಿದೆ.
'ವಾರದಿಂದೀಚೆಗೆ ಹೂವುಗಳಿಗೆ ಬೇಡಿಕೆ ಹೆಚ್ಚಿದೆ. ಸಂಕ್ರಾಂತಿ ಹತ್ತಿರದಲ್ಲಿರುವುದರಿಂದ ಜನರು ಹೆಚ್ಚು ಖರೀದಿಸುತ್ತಿದ್ದಾರೆ. ಹೀಗಾಗಿ ಬೆಲೆ ಹೆಚ್ಚಾಗಿದೆ. ಶಿವರಾತ್ರಿವರೆಗೂ ಇದೇ ದರ ಮುಂದುವರಿಯಲಿದೆ' ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಪ್ರಜಾವಾಣಿಗೆ ತಿಳಿಸಿದರು.
ತರಕಾರಿಗಳ ಪೈಕಿ ಟೊಮೆಟೊ, ಬೀನ್ಸ್, ಈರುಳ್ಳಿ ಸ್ವಲ್ಪ ತುಟ್ಟಿಯಾಗಿವೆ. ಕೆಲವು ವಾರಗಳಿಂದ ಹಾಪ್ಕಾಮ್ಸ್ ನಲ್ಲಿ ₹15 ಇದ್ದ ಟೊಮೆಟೊ ಬೆಲೆ ಈ ವಾರ ₹5 ಹೆಚ್ಚಾಗಿದೆ. ಅದೇ ರೀತಿ ಬೀನ್ಸ್ ಧಾರಣೆ ₹10, ಈರುಳ್ಳಿ ಬೆಲೆ ₹10 ಹೆಚ್ಚಾಗಿ ₹50 ತಲುಪಿದೆ.
'ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗುತ್ತಿದೆ. ಬೀನ್ಸ್ ಬರುವ ಪ್ರಮಾಣವೂ ಕಡಿಮೆಯಾಗಿದೆ. ಹಾಗಾಗಿ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಮಾಹಿತಿ ನೀಡಿದರು.
ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ದಾಳಿಂಬೆ ದುಬಾರಿ ಬೆಲೆ (₹200) ಮುಂದುವರಿದಿದೆ. ಕಿತ್ತಳೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಕೆಜಿಗೆ ₹50ಕ್ಕೆ ಮಾರಾಟವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.