ADVERTISEMENT

ಮಹಿಳೆ ವಿರುದ್ಧ ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ

ಮಲೆಮಹದೇಶ್ವರ ವನ್ಯಧಾಮದ ರಸ್ತೆಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಫೋಟೊ ವೈರಲ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:26 IST
Last Updated 21 ಜೂನ್ 2021, 16:26 IST
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಹಿಳೆ ಕೋತಿಗಳಿಗೆ ಆಹಾರ ನೀಡುತ್ತಿರುವುದು
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಹಿಳೆ ಕೋತಿಗಳಿಗೆ ಆಹಾರ ನೀಡುತ್ತಿರುವುದು   

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರು ವನ್ಯಪ್ರಾಣಿಗಳಿಗೆ ಆಹಾರ ನೀಡುತ್ತಿರುವ ಚಿತ್ರ ಹಾಗೂ ಆಹಾರವಿಲ್ಲದೆ ಕೋತಿಗಳು ಸಾಯುತ್ತಿದ್ದು, ಅವುಗಳಿಗೆ ಆಹಾರ ನೀಡಲಾಗುತ್ತಿದೆ ಎಂದು ಹೇಳುವ ವಿಡಿಯೊ ವೈರಲ್‌ ಆಗಿದ್ದು, ಅರಣ್ಯಾಧಿಕಾರಿಗಳು ಈಗ ಮಹಿಳೆಯ ಬೆನ್ನು ಬಿದ್ದಿದ್ದಾರೆ.

ಆನೆತಲೆದಿಂಬದಿಂದ ತಾಳುಬೆಟ್ಟದವರೆಗೆ ಟೊಮೊಟೊ, ಬಾಳೆಹಣ್ಣು ಸೇರಿದಂತೆ ಇನ್ನಿತರ ಹಣ್ಣುಗಳು ಎಸೆಯುವ ವಿಡಿಯೊ ಕೂಡ ಅರಣ್ಯ ಇಲಾಖೆಗೆ ಸಿಕ್ಕಿದೆ.

ಅಲ್ಲದೇ ಭುವನ್ ಎಂಬ ಹೆಸರಿನವರು, ‘ಮಹದೇಶ್ವರ ಬೆಟ್ಟದಲ್ಲಿ ಕೋತಿಗಳು ಮತ್ತು ಇತರೆ ಪ್ರಾಣಿ ಪಕ್ಷಿಗಳು ಯಾವುದೇ ಭಕ್ತಾಧಿಗಳು ಅಲ್ಲಿಗೆ ಹೋಗದಿರುವುದರಿಂದ ಹಸಿವಿನಿಂದ ಸಾವನ್ನಪ್ಪುತ್ತಿವೆ. ಬಾಳೆಹಣ್ಣು, ಟೊಮೆಟೊ, ಸೌತೆಕಾಯಿ ಹಾಗೂ ಇನ್ನಿತರೆ ಹಣ್ಣುಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿರುವ ಸಂದೇಶವೂ ಅರಣ್ಯ ಇಲಾಖೆಗೆ ಲಭ್ಯವಾಗಿದ್ದು, ಆತನ ವಿರುದ್ಧವೂ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

ADVERTISEMENT

‘ವನ್ಯಧಾಮದೊಳಗೆ ಪ್ರಾಣಿಗಳಿಗೆ ಆಹಾರ, ಹಣ್ಣು ಹಂಪಲು ನೀಡುವುದು ಕಾನೂನು ಬಾಹಿರ. ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಹಾಗೂ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಲೆಮಹದೇಶ್ವರ ವನ್ಯಧಾಮ ವಿಭಾಗದ ವತಿಯಿಂದ ಈಗಾಗಲೇ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕಾರ್ಯವೂ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಮಹಿಳೆಯು ಆಹಾರವನ್ನು ನೀಡಿರುವುದು ಕಾನೂನಿನ ಉಲ್ಲಂಘನೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.