
ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶನಿವಾರ ನೂತನ ರಥದ ಮೇಲೆ ಗರುಡೋತ್ಸವ ಸೇವೆ ನಡೆಸಲಾಯಿತು. ಭಕ್ತರು ಸರ್ವಾಲಂಕೃತ ತೇರನ್ನು ಸಂಭ್ರಮದಿಂದ ಎಳೆದರು.
ರಂಗನಾಥನ ದೈನಂದಿನ ಉತ್ಸವಗಳಲ್ಲಿ ಭಕ್ತರೇ ಉತ್ಸವ ಮೂರ್ತಿಗೆ ಹೆಗಲು ನೀಡುತ್ತಿದ್ದರು. ಉತ್ಸವ ಮೂರ್ತಿಯನ್ನು ಆಗಮಿಕರು ಮತ್ತು ದೇವಾಲಯ ಸಿಬ್ಬಂದಿ ಪ್ರತಿ ಬಾರಿ ಹೊತ್ತು ಸಾಗಬೇಕಿತ್ತು. ಜಿಲ್ಲೆಯ ಭಕ್ತರೊಬ್ಬರು ₹16 ಲಕ್ಷದ ರಥವನ್ನು ಕಾಣಿಕೆ ನೀಡಿದ್ದು, ಈ ರಥವನ್ನು ಸಿಂಗರಿಸಿ, ರಂಗಪ್ಪನ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ, ಗರುಡೋತ್ಸವ ನೆರವೇರಿಸಲಾಯಿತು.
ವಾರಾಂತ್ಯ ದಿನಗಳು ಮತ್ತು ಜಾತ್ರೆಗಳ ಸಂದರ್ಭ ಸ್ವಾಮಿಯ ಮೆರವಣಿಗೆ ಸಾಗುವಾಗ ಬೆಳ್ಳಿ ದಂಡಕ ಹೊತ್ತು ಭಕ್ತರು ದೇಗುಲದ ಸುತ್ತಲೂ ಸಾಗುವರು. ಹೊಸ ರಥವನ್ನು ಭಕ್ತಪಡೆ ಎಳೆದು ಹರಕೆ ಸಲ್ಲಿಸಲಿದ್ದಾರೆ ಎಂದು ಅರ್ಚಕ ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.