ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ನಿಷೇಧ ವಲಯವನ್ನಾಗಿ ಮಾಡಲಾಗಿದ್ದು ಈ ಬಾರಿ ಭಕ್ತರು ಹಸಿರು ದೀಪಾವಳಿ ಆಚರಣೆಗೆ ಒತ್ತು ನೀಡಬೇಕು, ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಅ.18ರಿಂದ 22ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ, ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಪ್ರತಿದಿನ 30,000ಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಭೇಟಿನೀಡುವ ನಿರೀಕ್ಷೆ ಇದೆ.
ಜಾತ್ರೆ ನಡೆಯುವ ವೇಳೆ ಕ್ಷೇತ್ರ ಹಾಗೂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ, ವಿತರಣೆ ಹಾಗೂ ಸಾಗಣೆಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು, ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಮಲೆ ಮಹದೇಶ್ವರ ಬೆಟ್ಟ ಸಂಪರ್ಕಿಸುವ ಎಲ್ಲ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ತಂದರೆ ವಶಕ್ಕೆ ಪಡೆಯಬೇಕು ಎಂದರು.
ಭಕ್ತರು ಕ್ಷೇತ್ರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಮುಂಚಿತವಾಗಿಯೇ ಭಕ್ತರಿಗೆ ತಿಳಿವಳಿಕೆ ನೀಡಿ ವ್ಯಾಪಕ ಪ್ರಚಾರ ಮಾಡಬೇಕು. ಪ್ಲಾಸ್ಟಿಕ್ಗೆ ಪರ್ಯಾಯವಾಗಿರುವ ವಸ್ತುಗಳನ್ನು ಉಪಯೋಗಿಸಬೇಕು, ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರ ಪರ್ಯಾಯ ಪರಿಸರ ಸ್ನೇಹಿ ವಸ್ತುಗಳ ಮಾರಾಟಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹಣ್ಣು, ಕಬ್ಬಿನ ಹಾಲು ಮಾರಾಟಗಾರರು ಮತ್ತು ಇತರೆ ವ್ಯಾಪಾರಸ್ಥರು ವ್ಯಾಪಾರ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ತ್ಯಾಜ್ಯವನ್ನು ರಸ್ತೆಗಳ ಮೇಲೆ ಸುರಿಯದೆ ಸಮರ್ಪಕವಾಗಿ ಮಾಡಬೇಕು. ಜಾತ್ರಾ ಸಂದರ್ಭದಲ್ಲಿ ತಾಳಬೆಟ್ಟ, ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಸದಂತೆ ಮನವೊಲಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಡೆಸಲಿದ್ದಾರೆ.
ಭಕ್ತರು, ದಾನಿಗಳು, ವ್ಯಾಪಾರಸ್ಥರು ಎಲ್ಲರೂ ಜತೆಗೂಡಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಸಿರು ದೀಪಾವಳಿ ಆಚರಿಸುವ ಮೂಲಕ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದರು.
ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಹನೂರು ತಹಶೀಲ್ದಾರ್ ಚೈತ್ರಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಪರಿಸರ ಅಧಿಕಾರಿ ಸವಿತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಚಾಮರಾಜನಗರ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿ ಡಾ.ಮಹೇಶ್, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಕಿರಣ್ ಸಭೆಯಲ್ಲಿ ಇದ್ದರು.
ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ತರಬೇಡಿ: ಡಿಸಿ ಮನವಿ | ‘ಪ್ಲಾಸ್ಟಿಕ್ ಬದಲಾಗಿ ಪರ್ಯಾಯ ವಸ್ತುಗಳ ಬಳಸಿ’ | ‘ಪ್ಲಾಸ್ಟಿಕ್ ಮುಕ್ತ ಮಾದಪ್ಪನ ಕ್ಷೇತ್ರವಾಗಿಸಲು ಕೈಜೋಡಿಸಿ’
ಪಡು ಮಾಡಲು ಪೂರ್ವಾನುಮತಿ ಕಡ್ಡಾಯ
ಕ್ಷೇತ್ರದಲ್ಲಿ ದಾನಿಗಳು ಆಹಾರ ಮತ್ತು ನೀರಿನ ವಿತರಣೆಗೆ ಕಾಗದದ ತಟ್ಟೆ ಲೋಟದಂತಹ ಪರಿಸರದಲ್ಲಿ ಸುಲಭವಾಗಿ ಕರಗುವ ವಸ್ತುಗಳನ್ನು ಬಳಸಬೇಕು. ನೀರಿನ ವಿತರಣೆಗೆ 5 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪುನರ್ ಬಳಕೆಗೆ ಯೋಗ್ಯವಾದ ಬಾಟಲಿಗಳನ್ನು ಬಳಸಬಹುದು. ಕ್ಷೇತ್ರದಲ್ಲಿ ಪರು ಮಾಡುವ (ಅಡುಗೆ) ಅನ್ನದಾನಿಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ಪೂರ್ವಾನುಮತಿ ಪಡೆಯಬೇಕು. ದಾನಿಗಳು ಆಹಾರ ವಿತರಣೆ ಮಾಡಿದ ಬಳಿಕ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.