ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಅಧಿಕ ಭಾರ ಹೊತ್ತ ಟಿಪ್ಪರ್ಗಳು ಹೆಚ್ಚು ಸಂಚರಿಸುತ್ತಿದ್ದು, ವಾಹನ ಸವಾರರು, ಸಾರ್ವಜನಿಕರು ಹೈರಾಣಾಗಿದ್ದಾರೆ.
ತಾಲ್ಲೂಕಿನ ಕೂತನೂರು, ಮಡಹಳ್ಳಿ ಗುಡ್ದ, ತೆರಕಣಾಂಬಿ ಹೋಬಳಿ ವ್ಯಾಪ್ತಿಯ ಕಿಲಗೆರೆ, ಕೊತ್ತಲವಾಡಿ ಹಾಗೂ ಬೇಗೂರು ಭಾಗದ ಹಸಗೂಲಿ, ತೊಂಡವಾಡಿ, ಹಿರೀಕಾಟಿ ಸೇರಿದಂತೆ ಇತರೆಡೆ ನಡೆಯುತ್ತಿರುವ ಕ್ವಾರೆಗಳಿಂದ ನೂರಾರು ಟಿಪ್ಪರ್ಗಳು ಪ್ರತಿನಿತ್ಯ ಕಲ್ಲು ತುಂಬಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಎಗ್ಗಿಲ್ಲದೆ ಸಂಚಾರ ಮಾಡುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಪ್ರಾಣ ಭಯದಿಂದ ಸಂಚರಿಸುವಂತಾಗಿದೆ.
ಪಲೀಸ್ ಠಾಣೆ ಮುಂದೆಯೇ ಸಂಚಾರ: ‘ತಾಲ್ಲೂಕಿನ ತೆರಕಣಾಂಬಿ, ಬೇಗೂರು, ಗುಂಡ್ಲುಪೇಟೆ ಪೊಲೀಸ್ ಠಾಣೆ ಮುಂಭಾಗ ಹಾಗೂ ಆರ್.ಟಿ.ಒ ಕಚೇರಿ ಎದುರೇ ಅಧಿಕ ಕಲ್ಲು ತುಂಬಿದ ಟಿಪ್ಪರ್ಗಳು ಹಾಗೂ ಎಂ. ಸ್ಯಾಂಡ್ ತುಂಬಿದ ಲಾರಿಗಳು ಪ್ರತಿನಿತ್ಯ ಸಂಚಾರ ಮಾಡುತ್ತಿವೆ. ಹೀಗಿದ್ದರೂ ಲಾರಿಗಳನ್ನು ತಪಾಸಣೆ ಮಾಡುತ್ತಿಲ್ಲ. ಟಿಪ್ಪರ್ ಮಾಲೀಕರ ಜೊತೆಗೆ ಅಧಿಕಾರಿಗಳು ಶಾಮೀಲಾಗಿರುವ ಶಂಖೆಯಿದೆ’ ಎಂದು ರೈತ ಮುಖಂಡ ಗಣೇಶ್ ಆರೋಪಿಸಿದರು.
ತಾಲ್ಲೂಕಿನಿಂದ ಪ್ರತಿನಿತ್ಯ ಹತ್ತಾರು ಟಿಪ್ಪರ್ಗಳು ಎಂ.ಸ್ಯಾಂಡ್ ಹಾಗೂ ಕ್ವಾರಿಯಿಂದ ಕಲ್ಲು ತುಂಬಿಕೊಂಡು ಕೇರಳಕ್ಕೆ ಹೋಗುತ್ತಿವೆ. ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ಈ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ತಹಶೀಲ್ದಾರ್ ರಮೇಶ್ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.