ಗುಂಡ್ಲುಪೇಟೆ: ಪಟ್ಟಣದ ವಿವಿಧ ವಾರ್ಡ್ಗಳಿಗೆ ಪುರಸಭೆ ಅಧ್ಯಕ್ಷ ಶಶಿಧರ್ ಪಿ.ದೀಪು, ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ, ಮುಖ್ಯಾಧಿಕಾರಿ ಶರವಣ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪಗಳ ಪರಿಶೀಲನೆ ನಡೆಸಿದರು.
ಪಟ್ಟಣದ ಕೆ.ಎಸ್. ನಾಗರತ್ನಮ್ಮ ಬಡಾವಣೆ, ಅಶ್ವಿನಿ ಬಡಾವಣೆ, ಅಂಬೇಡ್ಕರ್ ಸರ್ಕಲ್ ಮತ್ತು 7ನೇ ವಾರ್ಡ್ನ ಕೆಲ ಮನೆ ಮನೆಗೆ ಭೇಟಿ ನೀಡಿ ನಿವಾಸಿಗರು ಕಸ ಹಾಕುವ ಸ್ಥಳ, ಬೀದಿ ದೀಪ ಹಾಗೂ ಕುಡಿಯುವ ನೀರಿನ ಪೂರೈಕೆ, ದುರಸ್ತಿ ಸಂಬಂಧ ಪರಿಶೀಲಿಸಿದರು. ಈ ವೇಳೆ ನಿವಾಸಿಗರು ಕುಡಿಯುವ ನೀರು, ಸ್ವಚ್ಛತೆ ಸಂಬಂಧ ಹೆಚ್ಚು ದೂರು ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶಶಿಧರ್ ಪಿ.ದೀಪು ಮಾತನಾಡಿ, ಪಟ್ಟಣದ ನಿವಾಸಿಗಳು ಹಸಿ ಕಸ ಮತ್ತು ಒಣ ಕಸ ಬೇರ್ಪಡಿ ಪುರಸಭೆ ಆಟೊಗಳಿಗೆ ನೀಡಬೇಕು. ಖಾಲಿ ಜಾಗದಲ್ಲಿ ಕಸ ಹಾಕುವುದನ್ನು ಕೂಡಲೇ ನಿಲ್ಲಿಸಿ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಮಾತ್ರ ಆರೋಗ್ಯಕರ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಮ್ಮದ್ ಇಲಿಯಾಸ್, ಮೇಸ್ತ್ರಿ ಮೂರ್ತಿ ಸೇರಿದಂತೆ ಹಲವು ಮಂದಿ ಪೌರ ಕಾರ್ಮಿಕರು ಹಾಜರಿದ್ದರು.
ಗುಂಡ್ಲುಪೇಟೆ: ಪಟ್ಟಣ ಪುರಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಸ್ವಚ್ಛತೆಗಾಗಿ ಸ್ತ್ರೀ ಶಕ್ತಿ(ಸಂಚಾಲಕರು) ನೇಮಕಗೊಂಡಿದ್ದು, ಇವರು ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡುವಂತೆ ನಿವಾಸಿಗರು ಹಾಗೂ ಹೋಟೆಲ್ ತಿಳುವಳಿಕೆ ನೀಡಲಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಶವರಣ ತಿಳಿಸಿದರು.
ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಹೆಜ್ಜೆ ಇಡಲಾಗಿದ್ದು, ಪ್ರತಿ ಹೋಟೆಲ್, ಅಂಗಡಿಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ದಾಸ್ತಾನು ಮಾಡುವುದು ಮತ್ತು ನಿಷೇಧ ಮಾಡುವುದು, ಬೀದಿ ಬದಿ ವ್ಯಾಪಾರಿಗಳ ಆಹಾರ ಪದಾರ್ಥಗಳ ಸುಚಿತ್ವಕ್ಕೆ ಒತ್ತು ನೀಡುವಂತೆ ಸೂಚಿಸುವುದು. ಪ್ಲಾಸ್ಟಿಕ್ ಚೀಲ ಬಳಸದಂತೆ ಪರಿಶೀಲನೆ, ವಾಣಿಜ್ಯ ಅಂಗಡಿಗಳ ಉದ್ಯಮ ಪರವಾನಿಗೆ ಪಡೆಯದೆ ಮತ್ತು ನವೀಕರಿಸಿದೆ ಇರುವುದರ ಬಗ್ಗೆ ಪರಿಶೀಲನೆ ನಡೆಸುವುದು ಸೇರಿದಂತೆ ಇನ್ನಿತರ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡಲಿದ್ದಾರೆ. ಇದರಿಂದ ಪಟ್ಟಣದ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.