ADVERTISEMENT

ಗುಂಡ್ಲುಪೇಟೆ: ಸಫಾರಿಯಲ್ಲಿ ಜೀಪ್‌ ಅಟ್ಟಿಸಿಕೊಂಡು ಬಂದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:16 IST
Last Updated 8 ಸೆಪ್ಟೆಂಬರ್ 2025, 6:16 IST
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ವೇಳೆ ಕಾಡಾನೆಯೊಂದು ಜೀಪ್ ಅಟ್ಟಿಸಿಕೊಂಡು ಬಂದ ದೃಶ್ಯ
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ವೇಳೆ ಕಾಡಾನೆಯೊಂದು ಜೀಪ್ ಅಟ್ಟಿಸಿಕೊಂಡು ಬಂದ ದೃಶ್ಯ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ವೇಳೆ ಕಾಡಾನೆಯೊಂದು ಸಫಾರಿ ಜೀಪ್ ಅಟ್ಟಿಸಿಕೊಂಡು ಬಂದ ಘಟನೆ ಶನಿವಾರ ಸಂಜೆ ನಡೆದಿದೆ..

ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿದ್ದ ವೇಳೆ ಮೇಯುತ್ತಿದ್ದ ಕಾಡಾನೆಯೊಂದು ಏಕಾಏಕಿ ಜೀಪ್ ಮೇಲೆ ದಾಳಿಗೆ ಮುಂದಾಗಿದೆ. ಚಾಲಕ ಜೀಪ್ ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಹೀಗಿದ್ದರೂ ಶಾಂತವಾಗದ ಆನೆ ಗೀಳಿಡುತ್ತ, ಅಟ್ಟಾಡಿಸಿಕೊಂಡು ಸ್ವಲ್ಪ ದೂರ ಬಂದಿದೆ. ನಂತರ ನಿಧಾನಿಸಿ, ಮತ್ತೆ ಅಟ್ಟಾಡಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಕೂಡ ಭಯಭೀತರಾಗಿ ಕೂಗಾಡಿದ್ದಾರೆ. ತದ ನಂತರ ಕಾಡಾನೆ ಅರಣ್ಯದೊಳಗೆ ತೆರಳಿದೆ. ಸಫಾರಿ ಜೀಪ್ ಮೇಲೆ ಕಾಡಾನೆ ದಾಳಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

‘ಸಫಾರಿ ವಲಯದಲ್ಲಿ ಹುಲಿ, ಚಿರತೆ ಕಂಡರೆ ಚಾಲಕರು, ಉಳಿದ ವಾಹನಗಳ ಚಾಲಕರಿಗೆ ಫೋನ್‌ ಮಾಡಿ ಇಂತಹ ಜಾಗದಲ್ಲಿ ಪ್ರಾಣಿಗಳಿವೆ ಎಂಬ ಮಾಹಿತಿ ನೀಡುತ್ತಾರೆ. ಇದರಿಂದ ಹೆಚ್ಚು ವಾಹನಗಳನ್ನು ಕಂಡಾಗ ಕೆಲವೊಮ್ಮೆ ಆನೆಗಳು ತಾಳ್ಮೆ ಕಳೆದುಕೊಂಡು, ದಾಳಿಗೆ ಮುಂದಾಗುತ್ತವೆ’ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ವನ್ಯಪ್ರಿಯರ ಅಸಮಾಧಾನ: ಬಂಡೀಪುರ ಸಫಾರಿಗೆ ಕರೆದೊಯ್ಯುವ ಜೀಪ್ ಮತ್ತು ಬಸ್ ಚಾಲಕರು ಹುಲಿ, ಚಿರತೆ, ಕಾಡಾನೆ ಸೇರಿ ಇನ್ನಿತರ ಪ್ರಾಣಿಗಳನ್ನು ಕಂಡರೆ ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ವನ್ಯಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತಿದೆ. ಈ ವೇಳೆ ಬಹುತೇಕ ಪ್ರವಾಸಿಗರು ಫೋಟೊ, ವಿಡಿಯೊ ಸೆರೆಯುವ ಹಿಡಿಯುವ ಜೊತೆಗೆ ಕೂಗಾಡುತ್ತಾರೆ. ಈ ಕಾರಣದಿಂದ ಕಾಡಾನೆಯಂಥ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಅರಣ್ಯಾಧಿಕಾರಿಗಳು ಸಫಾರಿ ಚಾಲಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವನ್ಯಜೀವಿ ಪ್ರಿಯ ಬೆಂಡರವಾಡಿ ಡಾ.ಆನಂದ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.