
ಹನೂರು: ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವಡಕೆಹಳ್ಳ ಗ್ರಾಮದಲ್ಲಿ ರೈತ ಸಂಘದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 93ನೇ ದಿನ ಪೂರೈಸಿದೆ.
ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು, ಮಕ್ಕಳು, ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ವಿಫಲವಾಗಿವೆ ಎಂದು ಹೋರಾಟಗಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಬಂದಿದ್ದ ಮಂಡ್ಯ ಭಾಗದ ರೈತರೂ ಧರಣಿಯಲ್ಲಿ ಭಾಗವಹಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರವನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಶೈಲೇಂದ್ರ ಮಾತನಾಡಿ, ‘ಧರಣಿ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ.ಆರ್ ಮಂಜುನಾಥ್ ಅವರು, ಸಂಕ್ರಾಂತಿ ಹಬ್ಬದೊಳಗೆ ಡಿಪಿಆರ್ ಮಾಡಿಸಿಕೊಡಲಾಗುವುದು. ಇಲ್ಲದಿದ್ದರೆ ನಿಮ್ಮ ಜೊತೆ ನಾನು ಧರಣಿಯಲ್ಲಿ ಕೂರುವುದಾಗಿ ಹೇಳಿದ್ದರು. ಅವರು ನೀಡಿದ್ದ ಗಡುವು ಮುಗಿದು 10 ದಿನಗಳಾಗಿದೆ. ಡಿಪಿಆರ್ ಮಾಡಿಸಲೂ ಇಲ್ಲ. ಇತ್ತ ನಮ್ಮ ಜೊತೆಗೆ ಧರಣಿಯೂ ಕೂರದೇ ಶಾಸಕರು ಕೊಟ್ಟ ಮಾತು ತಪ್ಪಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಜಾನ್ ಜೋಸೆಫ್, ಆರೋಗ್ಯ ಸ್ವಾಮಿ, ಆರೋಗ್ಯ ದಾಸ್, ಜೋಸೆಫ್, ಜಂಬರ್ ಮಾದಯ್ಯ, ಕುಮಾರ್, ಸಂದನ ಪಾಳ್ಯ ರಾಜ, ಸವರಿಯಪ್ಪನ್, ಲೋಕೇಶ, ಸೆಲ್ವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.