ಯಳಂದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರಸಂಜೆ 4 ಗಂಟೆಯ ವೇಳೆ ಭಾರಿ ಶಬ್ದ ಕೇಳಿಬಂದಿದ್ದು, ಜನರು ಹೆದರಿ ಮನೆಯಿಂದ ಹೊರಗೆ ಓಡಿ ಬಂದರು.
ಪಟ್ಟಣದ ಬಹುತೇಕ ಮನೆಗಳಲ್ಲಿ ಪಾತ್ರೆ, ಇನ್ನಿತರ ವಸ್ತುಗಳು ಉರುಳಿ ಬಿದ್ದಿದ್ದು, ಜನರು ಆತಂಕದಿಂದ ಹೊರ ಬಂದು ಪರಸ್ಪರ ಚರ್ಚಿಸುತ್ತಿದ್ದರು.
ಎರಡು ಬಾರಿ ದೊಡ್ಡದಾದ ಸದ್ದು ಹತ್ತಾರು ಕಿಲೋಮೀಟರ್ ದೂರಕ್ಕೆ ಕೇಳಿ ಬಂದಿದೆ.
‘ಶಬ್ದದ ತೀವ್ರತೆಗೆ ನೆಲ ಅದುರಿದ ಅನುಭವ ಉಂಟಾಗಿದೆ. ಮನೆಯಲ್ಲಿ ಇದ್ದ ವಸ್ತುಗಳು ಕೆಳಗೆ ಬಿದ್ದಿವೆ. ಪ್ರಾಣಭಯದಿಂದ ಜನರು ರಸ್ತೆಗೆ ಓಡಿ ಬಂದರು’ ಎಂದು ಪಟ್ಟಣದ ಗೌರಮ್ಮ ಹೇಳಿದರು.
‘ಪಟ್ಟಣದ ಸುತ್ತಮುತ್ತ ಹಲವು ಕರಿ ಕಲ್ಲಿನ ಕ್ವಾರಿಗಳಿವೆ. ಆದರೆ, ಈ ಭಾಗದಲ್ಲಿ ಇಲ್ಲಿಯ ವರೆಗೆ ಇಷ್ಟು ತೀವ್ರತೆಯ ಶಬ್ದ ಕೇಳಿ ಬಂದಿಲ್ಲ. ಇನ್ನಷ್ಟೇ ಕಾರಣಗಳು ಗೊತ್ತಾಗಬೇಕಾಗಿದೆ’ ಎಂದು ಸಾರ್ವಜನಿಕರು ಹೇಳಿದರು.
ಕೆಲವು ದಿನಗಳ ಹಿಂದೆ ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯಲ್ಲೂ ರಾತ್ರಿ ಭಾರಿ ಸದ್ದು ಕೇಳಿ ಬಂದು, ಭೂಮಿ ಅದುರಿದ ಅನುಭವವಾಗಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದರು. ರಿಕ್ಟರ್ ಮಾಪಕದಲ್ಲಿ ಭೂಕಂಪನದ ವಿವರಗಳು ದಾಖಲಾಗಿರಲಿಲ್ಲ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.