ಗುಂಡ್ಲುಪೇಟೆ: ಸಾರ್ವಜನಿಕರು ಹಾಗೂ ಭಕ್ತರಿಂದ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಯೊಳಗೆ ಬಸ್ ಸಂಚಾರ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ತಹಸೀಲ್ದಾರ್ ಒಂದೇ ದಿನಕ್ಕೆ ಹಿಂಪಡೆದಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ಗೋಪಾಲನ ದರ್ಶನ ಎಂದಿನಂತೆ ಸಿಗಲಿದೆ.
ವಿವಿಧ ಕಾರಣ ನೀಡಿ ತಾಲ್ಲೂಕು ಆಡಳಿತ ಹಾಗೂ ತಹಸೀಲ್ದಾರ್ ಟಿ.ರಮೇಶ್ ಬಾಬು ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಗೆ ಬಸ್ ಸಂಚಾರ ನಿಷೇಧಿಸಿ ಗುರುವಾರ ಆದೇಶ ಹೊರಡಿಸಿದ್ದರು. ಆದರೆ, ಸಾರ್ವಜನಿಕರು ಹಾಗೂ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಕನ್ನೇಗಾಲ ಗ್ರಾಮಸ್ಥರು ಸ್ವತಃ ತಹಸೀಲ್ದಾರ್ ಬಳಿ ಆದೇಶ ಹಿಂಪಡೆಯುವಂತೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಕುರಿತು ತಹಸೀಲ್ದಾರ್ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅವರ ಸೂಚನೆ ಮೇರೆಗೆ ಈ ಹಿಂದೆ ಇದ್ದ ನಿಯಮದಂತೆ 4ರವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೊಸ ಆದೇಶ ಹಿಂಪಡೆದಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಿ ದೇವಾಲಯಕ್ಕೆ ಪ್ರಸಾದ ತಿನ್ನಲು ಬರುವ ಕಾಡಾನೆಯ ಮೇಲೆ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಟಿ.ರಮೇಶ್ ಬಾಬು ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ‘ದೂರದ ಊರುಗಳಿಂದ ಬರುವ ಪ್ರವಾಸಿಗರು, ಭಕ್ತರು ಹಾಗೂ ಸಾರ್ವಜನಿಕರಿಗೆ 3ರ ಒಳಗೆ ಬಸ್ ಸಂಚಾರ ನಿಷೇಧ ಆದೇಶದಿಂದ ಸಮಸ್ಯೆಯಾಗುತ್ತದೆ ಎಂದು ದೂರುಗಳು ಕೇಳಿಬಂದ ಹಿನ್ನೆಲೆ, ಪ್ರವಾಸಿಗರ ಅನುಕೂಲದ ಉದ್ದೇಶದಿಂದ ಹೊಸ ಆದೇಶ ಹಿಂಪಡೆಯಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.