ಚಾಮರಾಜನಗರ: ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಹಾಗೂ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕೊಳದ ಬೀದಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ವಾಸವಿ ಮಹಲ್ ರಸ್ತೆ, ಚಿಕ್ಕಂಗಡಿ ಬೀದಿ, ದೊಡ್ಡಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ ಚಾಮರಾಜೇಶ್ವರ ದೇವಸ್ಥಾನ ಆವರಣಕ್ಕೆ ತಲುಪಿದರು.
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್ ಅವರು ಮಾತನಾಡಿ, ‘ಹಲವು ವರ್ಷಗಳಿಂದಲ್ಲೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮೇಲೆ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಇತ್ತೀಚಿಗೆ ಕೇರಳದಲ್ಲಿ ಆರ್ಎಸ್ಎಸ್ ಮುಖ್ಯ ಶಿಕ್ಷಕ ನಂದುಕೃಷ್ಣ ಅವರನ್ನು ಹತ್ಯೆ ಮಾಡಿದ್ದಾರೆ. ಇದೊಂದು ರಾಕ್ಷಸೀ ಕೃತ್ಯ. ತಕ್ಷಣವೇ ಈ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ, ಚುಡಾ ಅಧ್ಯಕ್ಷ ಕುಣಗಾಣ ಶಾಂತಿಮೂರ್ತಿ, ಶಿವಾಜಿ ನೇತಾಜಿ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಸುಂದರ್ರಾಜ್, ನಗರಸಭೆಯ ಅಧ್ಯಕ್ಷೆ ಆಶಾ, ಸದಸ್ಯರಾದ ಶಿವರಾಜ್, ಮನೋಜ್ ಪಟೇಲ್, ಮಹದೇವಯ್ಯ, ರಾಘವೇಂದ್ರ, ಮುಖಂಡರಾದ ನೂರೊಂದು ಶೆಟ್ಟಿ, ಪಿ.ರಂಗಸ್ವಾಮಿ, ಚಿಕ್ಕರಾಜು, ಪುರುಷೋತ್ತಮ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಳಿಪುರ ಮಹೇಂದ್ರ, ತಾಲ್ಲೂಕು ಅಧ್ಯಕ್ಷ ವಿಜಯ ಬ್ಯಾಡಮೂಡ್ಲು, ನಗರ ಘಟಕ ಕಾರ್ಯದರ್ಶಿ ಪ್ರಕಾಶ್, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.