ADVERTISEMENT

ಚಾಮರಾಜನಗರ: ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 3:13 IST
Last Updated 22 ಫೆಬ್ರುವರಿ 2026, 3:13 IST
ಮುಳ್ಳೂರು ಕಮಲ್
ಮುಳ್ಳೂರು ಕಮಲ್   

ಕೊಳ್ಳೇಗಾಲ: ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿರುವುದು ಸರಿಯಲ್ಲ ಎಂದು ಮುಖಂಡ ಮುಳ್ಳೂರು ಕಮಲ್ ಹೇಳಿದರು.

ಧಾರ್ಮಿಕ ನಾಯಕರಿಗೆ ಅವಮಾನ ಮಾಡಿರುವುದು ಬಹಳ ತಪ್ಪು. ಸ್ವಾಮೀಜಿ ಯಾವ ಪಕ್ಷಕ್ಕೂ ಸೀಮಿತವಲ್ಲ ಕಾಂಗ್ರೆಸ್ ಏಜೆಂಟರು ಅಲ್ಲ. ಇಂತಹ ಆರೋಪ ಶುದ್ಧ ಸುಳ್ಳು. ದಲಿತ ಸಮುದಾಯದ ಒಬ್ಬ ಮಠಾಧೀಶರನ್ನು ಬೀದಿಗೆ ತಂದಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನವಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಯವರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಸ್ವಾಮೀಜಿ ಅವರಿಗೆ ಅವಮಾನ ಮಾಡುವಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹಾಗೂ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಮೈಸೂರಿನಿಂದ ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ರಮೇಶ್ ಹಾಗೂ ಗಂಗೋತ್ರಿಯ ಕೆಲವು ವಿದ್ಯಾರ್ಥಿಗಳನ್ನು ಕರೆತಂದು ಪ್ರತಿಭಟನೆಯ ಮೂಲಕ ಅವಮಾನ ಮಾಡಿದ್ದಾರೆ. ರಮೇಶ್ ಅವರು ಆರ್‌ಎಸ್‌ಎಸ್‌ ಏಜೆಂಟ್, ಹಾಗಾಗಿ ಬಲಗೈ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಈ ಇಬ್ಬರು ಗಣ್ಯ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.

ಮುಖಂಡ ನಟರಾಜ್ ಮಾಳಿಗೆ ಮಾತನಾಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ 13 ಜನರ ವಿರುದ್ಧ ಈಗಾಗಲೇ ಉದ್ದೇಶಪೂರ್ವಕವಾಗಿ ಪೊಲೀಸ್ ಇಲಾಖೆಯವರು ಪ್ರಕರಣ ದಾಖಲು ಮಾಡಿದ್ದಾರೆ, ಹಾಗಾಗಿ ಅದನ್ನು ಕೂಡಲೇ ರದ್ದು ಮಾಡಬೇಕು. ಪ್ರಕರಣ ದಾಖಲು ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಮ್ಮ ಜೀವನ ಇರೋವರೆಗೂ ಮನುವಾದಿಗಳ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹಾಗೂ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಅವರ ಕೈವಾಡದಿಂದ ಇಂತಹ ಪ್ರತಿಭಟನೆ ಹಾಳಾಗುತ್ತಿದೆ, ಹಾಗಾಗಿ ಸಮುದಾಯವನ್ನು ಒಡೆಯುವ ಕೆಲಸ ಯಾರು ಮಾಡಬಾರದು ಎಂದರು‌‌.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಸಿದ್ದಾರ್ಥ, ಮಂಜುನಾಥ್, ಪ್ರಭುಸ್ವಾಮಿ, ಶಾಂತರಾಜು, ಚಾಮರಾಜು, ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.