ಹನೂರು:ಅರಣ್ಯ ಇಲಾಖೆ ಹಾಗೂ ಕಾಡಂಚಿನ ನಿವಾಸಿಗಳ ನಡುವೆ ಸಾಮರಸ್ಯದ ಕೊರತೆಯೇ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸರಣಿ ಹತ್ಯೆ ನಡೆಯಲು ಕಾರಣ ಎಂಬ ಆರೋಪ ಕೇಳಿ ಬಂದಿದೆ. ಹಸುವನ್ನು ಹುಲಿ ಕೊಂದು ಹಾಕಿತು ಎಂಬ ಕಾರಣಕ್ಕೆ ಕಾಡಂಚಿನ ನಿವಾಸಿಗಳು ಹುಲಿ ಕೊಂದಿರುವುದು ಇತ್ತೀಚಿನ ಘಟನೆ.
906 ಚ.ಕಿ.ಮೀ ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುವ ಕಾನನ 2013ರಲ್ಲಿ ವನ್ಯಧಾಮವಾಯಿತು. ಬಳಿಕ ಅರಣ್ಯದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಏರಿಕೆಯಾಗುತ್ತಿದೆ. 2018ರಲ್ಲಿ ನಡೆದ ಹುಲಿ ಗಣತಿಯ ಸಂದರ್ಭ ಅಲ್ಲಲ್ಲಿ ತಾಯಿ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡು ಸಂತತಿ ಹೆಚ್ಚಾಗುತ್ತಿರುವ ಮುನ್ಸೂಚನೆ ದೊರೆತಿದೆ. ಏಳು ವರ್ಷಗಳಿಂದ ಹುಲಿ ಗಣತಿ ನಡೆದಿಲ್ಲವಾದರೂ ಹುಲಿ ಸೇರಿದಂತೆ ಬಲಿಪ್ರಾಣಿಗಳ ಸಂಖ್ಯೆ ಹೆಚ್ಚಾಗಿವೆ ಎನ್ನುತ್ತಾರೆ ಅಧಿಕಾರಿಗಳು.
ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಿಂದಲೂ ಹುಲಿಗಳು ಆವಾಸಸ್ಥಾನ ಹುಡುಕಿಕೊಂಡು ಮಲೆಮಹದೇಶ್ವರ ವನ್ಯಧಾಮದಲ್ಲಿ ನೆಲೆ ಕಂಡುಕೊಳ್ಳುತ್ತಿವೆ. ಈ ಹೊತ್ತಿನಲ್ಲೇ ಹುಲಿಗಳಿಗೆ ಸಂಕಷ್ಟ ಎದುರಾಗಿದ್ದು, ದಟ್ಟಾರಣ್ಯದಲ್ಲಿ ಸ್ವಚ್ಛಂದವಾಗಿದ್ದ ಅವು ಮಾನವನ ಸೇಡಿಗೆ ಬಲಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಪ್ರಾಣಿಪ್ರಿಯರು.
‘ಜುಲೈ 26ರಂದು ಐದು ಹುಲಿಗಳು ಮೃತಪಟ್ಟರೆ, ಅ.1ರಂದು ಒಂದು ಹುಲಿ ಬಲಿಯಾಗಿದೆ. ಆರೂ ಹುಲಿಗಳು ದ್ವೇಷದ ಕಿಚ್ಚಿಗೆ ಬಲಿಯಾಗಿರುವುದು ದುರಂತ’ ಎನ್ನುತ್ತಾರೆ ಪ್ರಾಣಿಪ್ರಿಯರಾದ ಮಾದೇಶ್.
ಸಾಮರಸ್ಯದ ಕೊರತೆ: ‘ಅರಣ್ಯ ಇಲಾಖೆ ಹಾಗೂ ಹಾಗೂ ಸ್ಥಳೀಯರ ನಡುವೆ ಸಾಮರಸ್ಯದ ಕೊರತೆಯೇ ಮಾನವ–ಪ್ರಾಣಿ ಸಂಘರ್ಷ ಉಲ್ಬಣವಾಗಲು ಕಾರಣ. ಕಾಡುಪ್ರಾಣಿಗಳಿಂದ ಜಾನುವಾರು ಮೃತಪಟ್ಟರೆ ಸಕಾಲಕ್ಕೆ ಪರಿಹಾರ ದೊರೆಯದಿರುವುದು, ಬೆಳೆ ನಾಶಕ್ಕೆ ಬಿಡಿಗಾಸು ಪರಿಹಾರ, ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆಯಬೇಕಾಗಿರುವುದೇ ಸ್ಥಳೀಯರು ಬಿರುಕು ಹೆಚ್ಚಾಗಲು ಕಾರಣ’ ಎನ್ನುತ್ತಾರೆ ಆದಿವಾಸಿ ಸಮುದಾಯದ ಮುಖಂಡರಾದ ಸಿ.ಮಾದೇಗೌಡ.
‘ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬಿಗಿಯಾದ ಕಾನೂನು, ನಿಯಮಗಳನ್ನು ಮುಂದಿಟ್ಟು ಅರಣ್ಯದಂಚಿನ ನಿವಾಸಿಗಳಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಪರಿಣಾಮ ಹುಲಿಯ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿವೆ’ ಎನ್ನುತ್ತಾರೆ ಮುಖಂಡರು.
‘ಕಾಡಂಚಿನ ನಿವಾಸಿಗಳೇ ಅರಣ್ಯ ರಕ್ಷಕರೆಂಬ ಸತ್ಯವನ್ನು ಅಧಿಕಾರಿಗಳು ಅರಿಯಬೇಕು. ವನ್ಯಜೀವಿ ಕಾಯ್ದೆ ಹಾಗೂ ಕಾನೂನುಗಳ ಬಗ್ಗೆ ಹಾಗೂ ಬೇಟೆಯಾಡಿದರೆ ಶಿಕ್ಷೆ, ದಂಡ ಹಾಗೂ ಎದುರಿಸಬೇಕಾದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಬೇಕು. ಪ್ರಾಣಿಗಳಿಂದ ಜಾನುವಾರುಗಳು ಮೃತಪಟ್ಟರೆ ತುರ್ತು ಪರಿಹಾರ ನೀಡುವುದರ ಜೊತೆಗೆ ನೈತಿಕ ಸ್ಥೈರ್ಯ ತುಂಬಬೇಕು’ ಎನ್ನುತ್ತಾರೆ ಮುಖಂಡ ಮಾದೇಗೌಡ.
ಅರಣ್ಯದೊಳಗಿರುವ ಗ್ರಾಮಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟರೆ ಮಾತ್ರ ಪರಿಹಾರ ಸಿಗಲಿದೆ. ಈ ಕುರಿತು ಅರಣ್ಯ ಸಚಿವರು ಶೀಘ್ರ ಆದೇಶ ಹೊರಡಿಸಲಿದ್ದಾರೆ–ಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಶೇ 60ರಷ್ಟು ಅರಣ್ಯ
ಹನೂರು ತಾಲ್ಲೂಕಿನಲ್ಲಿ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಿದ್ದು ಒಟ್ಟು ಭೂಪ್ರದೇಶದ ಶೇ 60ರಷ್ಟು ಅರಣ್ಯದಿಂದಲೇ ಕೂಡಿದೆ. ಅರಣ್ಯದೊಳಗೆ ಹಾಗೂ ಅಂಚಿನಲ್ಲಿ ಹಲವು ಗ್ರಾಮಗಳಿದ್ದು ಇಂದಿಗೂ ಕೃಷಿ ಹಾಗೂ ಹೈನುಗಾರಿಕೆಯನ್ನೇ ನೆಚ್ಚಿ ಬದುಕು ಕಟ್ಟಿಕೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾಡಂಚಿನ ನಿವಾಸಿಗಳ ಮಧ್ಯೆ ಸಾಮರಸ್ಯದ ಅಗತ್ಯವಿದೆ ಎನ್ನುತ್ತಾರೆ ಮುಖಂಡರಾದ ಮಾದೇಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.