ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್.ಬೆಟ್ಟ ವಲಯ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಗಂಡಾನೆ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಗಂಡಾನೆಗೆ ಅಂದಾಜು 35 ರಿಂದ 40 ವರ್ಷ ವಯಸ್ಸಾಗಿದ್ದು, ಅರಣ್ಯ ಸಿಬ್ಬಂದಿ ಜಿ.ಎಸ್.ಬೆಟ್ಟ ವಲಯದ ಹಂಗಳ ಸೌತ್ ಶಾಖೆಯ, ಸೋಮನಾಥಪುರ ಸ್ಯಾಂಡಲ್ ರಿಸರ್ವ್ನ ಹಿರಿಕೆರೆ ಅರಣ್ಯ ಪ್ರದೇಶದ ಬಳಿ ಗಸ್ತು ತಿರುಗುತ್ತಿದ್ದಾಗ ಕಂಡು ಬಂದಿದೆ. ಕಾಡಾನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಲಾಖಾ ಪಶು ವೈದ್ಯಾಧಿಕಾರಿಯವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದರು.
ಮರಣೋತ್ತರ ಪರೀಕ್ಷೆ ನಂತರ ಮೃತ ಕಾಡಾನೆ ಕಳೆಬರವನ್ನು ಅರಣ್ಯ ಇಲಾಖೆ ನಿಯಮಾನುಸಾರ ವಿಲೇ ಮಾಡಲಾಯಿತು. ಈ ಸಂದರ್ಭ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಮಲ್ಲೇಶ್, ವನ್ಯಜೀವಿ ಪರಿಪಾಲಕ ನಂಜುಂಡರಾಜೇ ಅರಸ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.