ADVERTISEMENT

ಕೊಳ್ಳೇಗಾಲ | 'ಅಕ್ರಮ ಚಟುವಟಿಕೆ ಸಹಿಸುವುದಿಲ್ಲ'

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 4:58 IST
Last Updated 15 ಜುಲೈ 2025, 4:58 IST
ಕೊಳ್ಳೇಗಾಲ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು
ಕೊಳ್ಳೇಗಾಲ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು   

ಕೊಳ್ಳೇಗಾಲ: ಅಕ್ರಮ ಮರಳು, ಕರಿಕಲ್ಲು, ಮಣ್ಣು ಸೇರಿದಂತೆ ಅನೇಕ ಖನಿಜ ಸಂಪತ್ತುಗಳು ಲೂಟಿ ಆಗುತ್ತಿದೆ ಹಾಗಾಗಿ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಇಂತಹ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಕ್ರಮ ಚಟುವಟಿಕೆ ಹೆಚ್ಚಾಗಿದೆ ಎಂದು ಅನೇಕರು ದೂರು ನೀಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇಂದಿನಿಂದಲೇ ಇಂತಹ ಚಟುವಟಿಕೆಯು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಬಾರದು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದರಲ್ಲೂ ಹೆಚ್ಚಾಗಿ ಮಣ್ಣು– ಮರಳು ಲೂಟಿಯಾಗುತ್ತಿದೆ. ಕೆರೆಗಳಲ್ಲಿ ರೈತರಿಗೆ ಉಚಿತವಾಗಿ ಮಣ್ಣನ್ನು ತೆಗೆದುಕೊಳ್ಳಿ ಎಂದರೆ ಖಾಸಗಿ ವ್ಯಕ್ತಿಗಳಿಗೆ ಮಣ್ಣನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆಯೂ ಸಹ ಗಮನ ಹರಿಸಬೇಕು ಎಂದರು.

ಹನೂರು ಶಾಸಕ ಮಂಜುನಾಥ್ ಮಾತನಾಡಿ, ರೈತರಿಗೆ ಕೃಷಿ ಪರಿಕರಗಳನ್ನು ಸರಿಯಾಗಿ ವಿತರಿಸದೆ ಕಾಟಾಚಾರಕ್ಕೆ ವಿತರಣೆ ಮಾಡುತ್ತಿದ್ದಾರೆ.ಪರಿಕರಗಳು ಕಳಪೆಯಾಗಿವೆ ಎಂದು ಹೇಳುತ್ತಿದ್ದಾರೆ. ಮುಖ್ಯವಾಗಿ ರೈತರಿಗೆ ಸರಿಯಾಗಿ ರಸ ಗೊಬ್ಬರಗಳು ಸಿಗುತ್ತಿಲ್ಲ. ಗೊಬ್ಬರ ಇದ್ದರೂ ಕೆಲ ಅಂಗಡಿ ಮಾಲೀಕರು ರಾಸಾಯನಿಕ ಗೊಬ್ಬರಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಹಾಗಾಗಿ ಗೊಬ್ಬರಗಳು ತಮಿಳುನಾಡು ಭಾಗದಿಂದ ಹೆಚ್ಚಾಗಿ ಬರುತ್ತಿದೆ. ಗೊಬ್ಬರದ ಅಂಗಡಿಗಳಲ್ಲಿ ಗೊಬ್ಬರವನ್ನು ಹೆಚ್ಚಾಗಿ ದಾಸ್ತಾನು ಮಾಡಿದರೂ ಗೊಬ್ಬರ ಖಾಲಿಯಾಗಿದೆ ಎಂದು ನಾಮಫಲಕ ಹಾಕುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ಅಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕಳಪೆ ರಸಗೊಬ್ಬರ ಮಾರಾಟ ಪ್ರಕರಣದ ಆರೋಪಗಳಿವೆ. ಇದರ ಬಗ್ಗೆ ಪರಿಶೀಲನೆ ಮಾಡಿ ಎಂದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ರಂಗಸ್ವಾಮಿ, ರೈತರಿಗೆ ಸರಿಯಾದ ರೀತಿಯಲ್ಲಿ ಸಲಕರಣೆಗಳನ್ನು ವಿತರಣೆ ಮಾಡುತ್ತಿದ್ದೇವೆ. ನಾಳೆಯಿಂದಲೇ ಪ್ರತಿಯೊಂದೂ ಗೊಬ್ಬರ ಅಂಗಡಿಗಳಿಗೂ ಭೇಟಿ ನೀಡಿ ಉತ್ತಮವಾದ ರಸಗೊಬ್ಬರ ವಿತರಣೆಗೆ ಸೂಚನೆ ನೀಡುತ್ತೇನೆ ಎಂದರು. 

ಹನೂರು ಶಾಸಕ ಮಂಜುನಾಥ್ ಮಾತನಾಡಿ, ಪಶು ವೈದ್ಯಾಧಿಕಾರಿಗಳು ಇಬ್ಬರು ಮಾತ್ರ ಇದ್ದು ಹೆಚ್ಚುವರಿ ಪಶು ವೈದ್ಯಾಧಿಕಾರಿಗಳು ನೇಮಿಸುವಂತೆ ಸಚಿವರ ಜೊತೆ ಈಗಾಗಲೇ ಇಬ್ಬರೂ ಶಾಸಕರು ಮಾತನಾಡಿದ್ದೇವೆ. ಸಚಿವರು ಖಾಲಿ ಇದ್ದ ಸ್ಥಳಕ್ಕೆ ವೈದ್ಯರನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಸಭೆಯನ್ನು 19ಕ್ಕೆ ಮುಂದೂಡಲಾಗಿದೆ. ಸಭೆಯಲ್ಲಿ ತಹಶೀಲ್ದಾರ್ ಬಸವರಾಜು, ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಸುರೇಂದ್ರ ,ಇಒ ಗುರುಶಾಂತಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಉಪಸ್ಥಿತರಿದ್ದರು.

ADVERTISEMENT

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಿ’ ಶಾಸಕ ಎ.ಆರ್.ಕೃಷ್ಣಮೂರ್ತಿ ಈ ಸಾಲಿನಲ್ಲಿ ಶೇ100ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಬರುತ್ತಿತ್ತು ಆದರೆ ಈಗ ಫಲಿತಾಂಶ ಕಡಿಮೆಯಾಗಿದೆ. ಇದು ಸರಿಯಲ್ಲ ಹಾಗಾಗಿ ಶಿಕ್ಷಕರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಸರಿಯಾಗಿ ಓದದ ಮಕ್ಕಳನ್ನು ಶಾಲೆ ಶಿಕ್ಷಕರು ದತ್ತು ಪಡೆದು ಬೋಧಿಸಬೇಕು. ನಮ್ಮ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿದರೆ ನಿಜಕ್ಕೂ ಬೇಸರ ಆಗುತ್ತದೆ. ಹಾಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಾರಿ ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.