ಚಾಮರಾಜನಗರ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಕೆರೆಗಳಿಂದ ನೀರೆತ್ತುವ ಯೋಜನೆ ಸಂಪೂರ್ಣ ಅವೈಜ್ಞಾನಿಕ ಹಾಗೂ ವೆಚ್ಚದಾಯಕ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಆರೋಪಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಹರಿಯುವ ಕಾವೇರಿ ನದಿಯಿಂದ ನೀರನ್ನು ಮೇಲೆತ್ತಿ ಮುಂಗಾರು ಅವಧಿಯಲ್ಲಿ ನೇರವಾಗಿ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆ ಮಾಡುವುದು, ಮುಂಗಾರು ನಂತರ ನದಿಯ ಬಲಭಾಗದಲ್ಲಿರುವ ಅಗರ ಮತ್ತು ಮದ್ದೂರು ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನು ಮೇಲೆತ್ತಿ ಕೊಳವೆ ಮಾರ್ಗದ ಮೂಲಕ ಕೈಗಾರಿಕೆಗಳಿಗೆ ನೀಡುವುದು ಯೋಜನೆ ಸ್ಪರೂಪವಾಗಿದೆ.
150 ಕಿ.ಮೀ ದೂರದಲ್ಲಿರುವ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಕೆರೆಗಳಿಂದ ನೀರೊದಗಿಸಲು ಯೋಜನೆ ರೂಪಿಸಿರುವುದು ಅವೈಜ್ಞಾನಿಕ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದಲೂ ಉಚಿತವಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಅಗರ ಹಾಗೂ ಮದ್ದೂರು ಕೆರೆಗಳ ನೀರನ್ನು ಮೇಲೆತ್ತಿ ನದಿಯನ್ನು ಹಾದುಹೋಗುವಂತೆ ಪೈಪ್ಲೈನ್ ಮೂಲಕ ಸಾಗಿಸುವುದು ತಾಂತ್ರಿಕವಾಗಿಯೂ ಉತ್ತಮ ಯೋಜನೆಯಲ್ಲ. ಉಭಯ ಕೆರೆಗಳು ಈ ಭಾಗದ ದೊಡ್ಡ ನೀರಿನ ಮೂಲಗಳಾಗಿದ್ದು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿವೆ. ಜನವರಿ ನಂತರ ನೈಸರ್ಗಿಕವಾಗಿ ಹಾಗೂ ಕಬಿನಿ ಬಲದಂಡೆ ನಾಲೆಯ ಮೂಲಕ ಕೆರೆಯಲ್ಲಿ ಸಂಗ್ರಹವಾಗುವ ನೀರು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಜನ ಜಾನುವಾರುಗಳ ಕುಡಿಯುವ ಉದ್ದೇಶಕ್ಕೂ ಬಳಕೆಯಾಗುತ್ತದೆ.
ಯೋಜನೆಯ ಸಾಧಕ ಬಾಧಕಗಳ ಕುರಿತು ಸ್ಥಳೀಯ ಶಾಸಕರು, ಸಚಿವರು, ಸಂಸದರ ಜೊತ ಚರ್ಚಿಸದೆ ಏಕಪಕ್ಷೀಯವಾಗಿ ಯೋಜನೆ ರೂಪಿಸಿ ಟೆಂಡರ್ ಹಂತಕ್ಕೆ ತಂದಿರುವುದು ಖಂಡನೀಯ. ಕಾವೇರಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೆಜ್ ನಿರ್ಮಿಸಿ ನೀರನ್ನು ಎತ್ತುವ ಪ್ರಸ್ತಾವ ಕೈಬಿಟ್ಟು ಕೆರೆಗಳನ್ನು ತುಂಬಿಸಿ ಅದೇ ಕೆರೆಗಳಿಂದ ನೀರೆತ್ತಿ ಬೆಂಗಳೂರಿಗೆ ಹೊತ್ತೊಯ್ಯುವುದು ಸರಿಯಲ್ಲ, ಸರ್ಕಾರ ಯೋಜನೆಯನ್ನು ಕೈಬಿಡಬೇಕು ಎಂದು ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ಸುವರ್ಣಾವತಿ ನದಿಯ ಭಾಗವಾಗಿ ಹಲವು ಕೆರೆಗಳನ್ನು ನಿರ್ಮಿಸಲಾಗಿದ್ದು ಈ ಭಾಗದ ರೈತರ ಜೀವನಾಡಿಯಾಗಿದೆ. ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವ ಯೋಜನೆ ಜಾರಿಮಾಡುವ ಬದಲು ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು, ಅಂತರ್ಜಲ ಹೆಚ್ಚಿಸಬೇಕು, ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯೋಗೀಶ್, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇದ್ದರು.
‘ಜಿಲ್ಲೆಯಲ್ಲಿ ಕಾವೇರಿ ಹರಿದರೂ 10 ದಿನಕ್ಕೊಮ್ಮೆ ಕುಡಿಯುವ ನೀರು’ ಜಿಲ್ಲೆಯ ಜನರಿಗೆ ಸಮರ್ಪಕ ಕುಡಿಯುವ ನೀರು ಸಿಗಲಿ: ಎಆರ್ಕೆ ‘ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ನೀರೆತ್ತುವ ಯೋಜನೆ’
ಸ್ಥಳೀಯ ಜನಪ್ರತಿನಿಧಿಗಳ ಕಡೆಗಣನೆ ಕೆರೆಗಳಿಂದ ನೀರೆತ್ತುವ ಯೋಜನೆ ಜಾರಿಗೂ ಮುನ್ನ ಸ್ಥಳೀಯ ಶಾಸಕರು ಸಂಸದರು ಸಚಿವರ ಜೊತೆ ಚರ್ಚಿಸದಿರುವುದು ಬೇಸರದ ವಿಚಾರ. ಮುಂಚಿತವಾಗಿ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಿದ್ದರೆ ಯೋಜನೆ ಟೆಂಡರ್ ಹಂತಕ್ಕೆ ಬರುತ್ತಿರಲಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.