ಯಳಂದೂರು: ತಾಲ್ಲೂಕಿನ ಮುಂಗಾರು ರೈತರ ಕೈಹಿಡಿಯದಿದ್ದರೂ ತುಂತುರು ಮಳೆ ಅಲ್ಲಲ್ಲಿ ಸುರಿಯುತ್ತಿದೆ. ಕಳೆದೆರಡು ವಾರದಿಂದ ಕಬಿನಿ ನಾಲೆಯಲ್ಲಿ ನೀರು ಹರಿದಿದೆ. ಹಾಗಾಗಿ, ಕೃಷಿಕರು ಉಳುವ, ಬಿತ್ತುವ ಚಟುವಟಿಕೆ ಜತೆಗೆ ಸಸಿ ಮಡಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬಹುತೇಕ ರೈತರು ಭತ್ತ ಸಾಗುವಳಿಗೆ ಆದ್ಯತೆ ನೀಡಿದ್ದಾರೆ. ಕೊಳವೆಬಾವಿ ನಂಬಿದವರು ಕಬ್ಬು ನಾಟಿಗೆ ಮುಂದಾಗಿದ್ದಾರೆ. ಮುಸುಕಿನಜೋಳ, ರಾಗಿ ಬಿತ್ತನೆ ಕೊನೆಯ ಸ್ಥಾನ ಪಡೆದರೆ, ತೆಂಗು, ಅಡಿಕೆ, ಕಾಫಿ, ಅರಿಸಿನ ಹಾಗೂ ಶುಂಠಿ ಬಿತ್ತನೆ ಹೆಚ್ಚಿದ್ದು, ಹೊಸ ತಳಿಗಳ ಹಣ್ಣಿನ ಸಸಿಗಳ ನಾಟಿಯೂ ನಡೆದಿದೆ.
‘ರೈತರು ಭೂಮಿ ಹಸನುಗೊಳಿಸುವ ಕಾಯಕ ಪ್ರಾರಂಭಿಸಿದ್ದಾರೆ. ಬೆಳೆಗಳ ಕೊಯ್ಲು ಇನ್ನೂ ನಡೆದಿದೆ. ಉದ್ದು, ಹೆಸರು, ಅಲಸಂದೆ ಕಟಾವು ಮಾಡಿದ ಭೂಮಿಯಲ್ಲಿ ಒಕ್ಕಣೆ ನಡೆಯುತ್ತಿದೆ. ಶ್ರಮಿಕರ ಕೊರತೆಯೂ ಎದುರಾಗಿದ್ದು, ಬೇಸಾಯ ಕಾರ್ಯಕ್ಕೆ ರೈತರು ಯಂತ್ರಗಳ ಬಳಕೆ ಹೆಚ್ಚಿಸಿದ್ದಾರೆ. ಸಸಿ ಮಡಿ ತಯಾರಿ ಕಾಯಕ ತ್ವರಿತ ಗೊಂಡಿದ್ದು , 15 ದಿನಗಳಲ್ಲಿ ನಾಟಿ ಚಟುವಟಿಕೆ ಬಿರುಸು ಪಡೆಯಲಿದೆ’ ಎಂದು ಕೃಷಿಕ ಮಾಂಬಳ್ಳಿ ಮಹದೇವ್ ಹೇಳಿದರು.
‘ಕಬಿನಿ ಕಾಲುವೆಯಲ್ಲಿ ನೀರು ಹರಿಯುತ್ತಿದೆ. ನಾಲೆ ನೀರು ಸಣ್ಣ ಹಿಡುವಳಿದಾರರ ನೀರಿನ ಅವಶ್ಯಕತೆ ಪೂರೈಸುತ್ತದೆ. ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದರಿಂದ ವ್ಯವಸಾಯ ಭೂಮಿ ಹೊಂದಿಸಿಕೊಳ್ಳುವುದು ಸುಲಭವಾಗಲಿದೆ. ಈ ವರ್ಷ ಮಳೆ ಕೈಕೊಟ್ಟರೂ ನಾಟಿಗೆ ಹಿನ್ನಡೆ ಆಗದು’ ಎಂದು ಹೊನ್ನೂರು ರೈತ ಸಿ.ನಾಗರಾಜು ತಿಳಿಸಿದರು.
‘ಮಳೆ ನಿರೀಕ್ಷೆ ’:
‘ಆಗಸ್ಟ್ 6 ರಿಂದ ಆ. 12 ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಇದೆ. ಉಷ್ಣಾಂಶ 28 - 20 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಈ ಅವಧಿಯಲ್ಲಿ ಪೋಷಕಾಂಶಗಳ ಸೋರಿಕೆ ಮತ್ತು ಬೆಳೆ ಹಾನಿಯನ್ನು ತಡೆಯಲು ನೀರಾವರಿ ಮತ್ತು ರಸಗೊಬ್ಬರ ಹಾಕುವುದನ್ನು ಮುಂದೂಡಬೇಕು ಬಾಳೆ ಟೊಮೆಟೊ ಅರಸಿನ ಮೆಕ್ಕೆ ಜೋಳಗಳಿಗೆ ರೋಗ ಮತ್ತು ಕೀಟದ ಹಾವಳಿ ತಡೆಯಲು ಲಘು ಪೋಷಕಾಂಶ ನೀಡಬೇಕು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ ವೆಂಕಟರಂಗಶೆಟ್ಟಿ ಹೇಳಿದರು.
'10 ಸಾವಿರ ಹೆಕ್ಟೇರ್ನಲ್ಲಿ ಕೃಷಿ’:
‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 10.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ವ್ಯಾಪಿಸಿದೆ. ಭತ್ತ 3500 ಹೆಕ್ಟೇರ್ ಗೋವಿನಜೋಳ 1000 ರಾಗಿ 500 ಕಬ್ಬು 2500 ಹೆಕ್ಟೇರ್ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ. 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಮತ್ತು ಅಲ್ಪ ಪ್ರಮಾಣದಲ್ಲಿ ರೇಷ್ಮೆ ಕೃಷಿ ನಡೆದಿದೆ. ಭಾನುವಾರ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದು. ಮಳೆ ಸುರಿಯುವ ಭರವಸೆ ಮೂಡಿಸಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಎನ್.ಜಿ.ಅಮೃತೇಶ್ವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.