ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ದೊಡ್ಡ ರಂಗನಾಥನ ಕೆರೆ ಗುರುವಾರ ಕೋಡಿ ಬಿದ್ದಿದ್ದು ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ವರ್ಷ ಮಳೆ ಕಡಿಮೆ ಪ್ರಮಾಣದಲ್ಲಿ ಆಗದ ಕಾರಣ ಕೆರೆ ತುಂಬುವುದು ಅನುಮಾನವಿತ್ತು ಎಂದು ರೈತರು ಹೇಳುತ್ತಿದ್ದರು. ಈಗ ಕೋಡಿ ಬಿದ್ದ ಪರಿಣಾಮ ಗ್ರಾಮಸ್ಥರು ಹಾಗೂ ರೈತರ ಸಂತಸ ವ್ಯಕ್ತಪಡಿಸಿದ್ದಾರೆ.
ಕಬಿನಿ ಜಲಾಶಯ ಹಾಗೂ ಗುಂಡಾಲ್ ಜಲಾಶಯಗಳಿಂದ ನೀರು ಬಿಟ್ಟ ಕಾರಣ ನಾಲೆಗಳ ಮೂಲಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆರೆಯನ್ನು ತುಂಬಿಸುವಲ್ಲಿ ಮುಂದಾಗಿದ್ದಾರೆ. ಈ ಕೆರೆ ಬಹುತೇಕ ಭರ್ತಿಯಾಗಿದ್ದು ನಂತರ ಸಮೀಪದ ಚಿಕ್ಕರಂಗನಾಥನಕೆರೆ ತುಂಬಿ ಇತರ ಕೆರೆಗಳು ಭರ್ತಿಯಾಗಲಿವೆ.
ಈ ಭಾಗದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ನೀರಾವರಿ ಇದ್ದು, ಈ ನೀರನ್ನೆ ಭತ್ತ, ಜೋಳ, ರಾಗಿ, ಕಬ್ಬು, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಕೆರೆ ತುಂಬದ ಕಾರಣ ರೈತರು ನಾಟಿ ಮಾಡಲು ಹಿಂದೇಟು ಹಾಕಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಬಿದ್ದ ಮಳೆ ಹಾಗೂ ಕೆರೆಗಳು ತುಂಬುತ್ತಿರುವುದನ್ನು ಗಮನಿಸಿದ ರೈತರು ನಾಟಿ ಮಾಡುವಲ್ಲಿ ಮುಂದಾದರು. ಕೆರೆ ತುಂಬಿದರು ಸಹ ನೀರು ನಿಲ್ಲುವುದಿಲ್ಲ ಇದಕ್ಕೆ ಕಾರಣ ಹೂಳು ತೆಗೆದಿಲ್ಲ ಹಾಗಾಗಿ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ಕೆರೆ ಸ್ವಚ್ಛಗೊಳಿಸುವಲ್ಲಿ ಹಾಗೂ ಹೂಳು ತೆಗೆಸುವಲ್ಲಿ ಮುಂದಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಿದ್ದಯ್ಯನಪುರ ಗ್ರಾಮದ ರೈತ ಮುರುಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮೀನು ಹಿಡಿಯುವ ಸಂಭ್ರಮ
ಕೆರೆ ತುಂಬಿದರೆ ಸಾಕು; ಈ ಗ್ರಾಮದ ಯುವಕರು ಕೋಡಿ ಬೀಳುವ ಜಾಗದಲ್ಲಿ ಮೀನು ಹಿಡಿಯಲು ಮುಗಿ ಬೀಳುತ್ತಾರೆ. ಒಂದು ಕಡೆ ಕೋಡಿ ಬಿದ್ದ ಹಿನ್ನೆಲೆ ರೈತರು ಖುಷಿ ಪಟ್ಟರೆ ಇನ್ನೊಂದು ಕಡೆ ಮೀನು ಹಿಡಿಯುವ ಯುವಕರು ಸಂತಸ ಪಡುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಬಲೆ ಹಾಕಿ ಮೀನನ್ನು ಹಿಡಿದು ಕೆಲವರು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಇನ್ನೂ ಕೆಲವರು ಸ್ಥಳದಲ್ಲೇ ಫಿಶ್ ಫ್ರೈ ಫಿಶ್ ಸಾಂಬಾರ್ ಸೇವನೆ ಮಾಡಿ ಮನೆಗೆ ತೆರಳುತ್ತಿದ್ದಾರೆ. ಒಟ್ಟಾರೆ ಮೀನು ಹಿಡಿಯುವಲ್ಲಿ ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.