ADVERTISEMENT

ಜೋತಿರ್ಭೀಮೇಶ್ವರ ವ್ರತ: ಕಂದಹಳ್ಳಿ ಮಾದಪ್ಪ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:22 IST
Last Updated 25 ಜುಲೈ 2025, 2:22 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಾದಪ್ಪ ದೇಗುಲದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಸತ್ತಿಗೆ ಸೂರಿಪಾನಿ ಹೊತ್ತು ಗುರುವಾರ ಭಕ್ತರು ರಥ ಎಳೆದರು 
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಾದಪ್ಪ ದೇಗುಲದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಸತ್ತಿಗೆ ಸೂರಿಪಾನಿ ಹೊತ್ತು ಗುರುವಾರ ಭಕ್ತರು ರಥ ಎಳೆದರು    

ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಮಾದಪ್ಪ ಮಹೋತ್ಸವ ಗುರುವಾರ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಡಗರ ಸಂಭ್ರಮಗಳ ನಡುವೆ ಅದ್ದೂರಿಯಾಗಿ ಜರುಗಿತು. ಆಷಾಢ ಬಹುಳ ಅಮಾವಾಸ್ಯೆ ಪುನರ್ವಸು ನಕ್ಷತ್ರದಲ್ಲಿ ಮಹದೇಶ್ವರನ ತೇರು ಎಳೆದು ಪುನೀತರಾದರು.

ಮುಂಜಾವದಿಂದಲೇ ದೇಗುಲದಲ್ಲಿ ಮಹದೇಶ್ವರರ ಕೀರ್ತನೆ ಮೊಳಗಿತು. ಗುಡಿಯಲ್ಲಿ ಹೋಮ, ಹವನ ನಡೆಸಿ ಮಂಗಳಾರತಿ ಮಾಡಲಾಯಿತು. ಶಿವಲಿಂಗಕ್ಕೆ ವಿಭೂತಿ, ಹೂವಿನ ಹಾರದಿಂದ ಅಲಂಕರಿಸಿ, ಚಿನ್ನದ ಆಭರಣ ಹಾಕಿ ಶಿವ ಸ್ತ್ರೋತ್ರ ಪಠಿಸಲಾಯಿತು. ಮಹಾ ಮಂಗಳಾರತಿ ನಂತರ ಅಭಿಷೇಕ ಪೂಜೆ ನಡೆಯಿತು. ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. 

ಪ್ರತಿ ವರ್ಷ ಆಷಾಢ ಅಮಾವಾಸ್ಯೆಯಂದು ಉತ್ಸವ ಜರುಗುತ್ತದೆ. ಹರಕೆ ಹೊತ್ತ ಭಕ್ತರು ಗುಡಿಯ ಸುತ್ತ ತಳಿರು ತೋರಣ ಕಟ್ಟಿ, ಚಂಡು ಹೂ, ಸುಗಂಧಪುಷ್ಪ, ಮರಲೆ, ಜಾಜಿ ಹೂಗಳಿಂದ ಸಿಂಗರಿಸಿದ್ದರು. ನಂತರ ಆಗಮಿಕರು ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿದರು. ಮಂಗಳ ವಾದ್ಯ ಮೊಳಗಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ತ್ರೀಯರು ಮತ್ತು ಮಕ್ಕಳು ದೇವಳದ ಸುತ್ತಲೂ ಪ್ರದಕ್ಷಿಣಾ ಪಥದಲ್ಲಿ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ‘ಉಘೇ ಮಾದಪ್ಪ’ ಭಕ್ತಿ ನಮನ ಗುಡಿಯಲ್ಲಿ ಪ್ರತಿಧ್ವನಿಸಿತು.

ADVERTISEMENT

ಭಕ್ತರು ಗುಡಿ ಮುಂಭಾಗ ಊದಿನಕಡ್ಡಿ ಹಚ್ಚಿ, ಸುಗಂಧ ತುಂಬಿದರು. ಕರ್ಪೂರದ ಮಂದಾರತಿ ಹಾಗೂ ಧೂಪದ ಘಮಲು ಆಲಯ ತುಂಬಿತ್ತು. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದವರು ಹೂ ಪ್ರಸಾದ ಸ್ವೀಕರಿಸಿ, ತೀರ್ಥ ಚಿಮುಕಿಸಿಕೊಂಡು ಧನ್ಯತೆ ಮೆರೆದರು.

ಯಳಂದೂರು ಪಟ್ಟಣದಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ಸಂಚರಿಸಿದ ಪರಿಣಾಮ ಸವಾರರು ಹೊರಹೋಗಲು ಪ್ರಾಯಾಸಪಟ್ಟರು.

ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ಸಂಜೆ ತನಕ ಅನ್ನ ಪ್ರಸಾದ ವಿತರಣೆ ನಡೆಯಿತು. ಪಂಕ್ತಿ ಸೇವೆಯಲ್ಲಿ ನೂರಾರು ಕರ ಸೇವಕರು ಪಾಯಸ, ಕಡಲೆಹುಳಿ, ಅನ್ನಸಾರು ಬಡಿಸಿದರು. ಹತ್ತಾರು ಕೊಪ್ಪರಿಗೆಗಳಲ್ಲಿ ಸಿದ್ಧಗೊಂಡ ಭೂರಿ ಭೋಜನದ ತಯಾರಿಗೆ ದೇವಳ ಆಡಳಿತ ಸಮಿತಿ ಮೂರು ತಿಂಗಳಿಂದ ಶ್ರಮಿಸಿತ್ತು. ಅಕ್ಕಪಕ್ಕದ ಗ್ರಾಮಸ್ಥರು ಭಕ್ತಾದಿಗಳ ಸೇವೆಗೆ ಸಹಕಾರ ನೀಡಿದರು. ತಂಪು ವಾತಾವರಣ ಭಕ್ತರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿತು ಎಂದು ಗ್ರಾಮದ ಮುಖಂಡರು ಹೇಳಿದರು.

ಯಳಂದೂರು ಪಟ್ಟಣದ ಸುತ್ತಮುತ್ತ ಸುಮಾರು 1 ಕಿ.ಮೀ. ಸುತ್ತಮುತ್ತ ಜನಜಂಗುಳಿ ಮತ್ತು ವಾಹನಗಳ ದಟ್ಟಣೆ ಕಂಡುಬಂದಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಮಹದೇಶ್ವರರ ಉದ್ಭವ ಮೂರ್ತಿಗೆ ಫಲ ಪುಷ್ಪಗಳ ಅಲಂಕಾರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.