ಕೊಳ್ಳೇಗಾಲ: ಇಲ್ಲಿನ ಪಾಪನ ಕೆರೆಯಲ್ಲಿ ನೀರಿಲ್ಲದೆ ಬಣಗುಡುತ್ತಿರುವ ಕಾರಣ ರೈತರು ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಎರಡು ತಿಂಗಳಿಂದಲೂ ಕಾವೇರಿ ನದಿ ಉಕ್ಕಿ ಹರಿದು ನದಿ ತೀರದ ಗ್ರಾಮಗಳು ಪ್ರವಾಹ ಭೀತಿಯನ್ನು ಎದುರಿಸಿವೆ. ಕಾವೇರಿ ನದಿ ಪಾಪನಕೆರೆಯಿಂದ ಕೂಗಳತೆಯ ದೂರದಲ್ಲಿ ಇದೆ. ಸುತ್ತಮುತ್ತಲಿನ ಕೆರೆಗಳು ಹಾಗೂ ನದಿಗಳು ಭರ್ತಿಯಾಗಿದ್ದರೂ ಇಲ್ಲಿನ ಕೆರೆ ಮಾತ್ರ ಇನ್ನೂ ತುಂಬಿಲ್ಲ.
ಈ ಕೆರೆ 738 ಎಕರೆ ಜಮೀನಿಗೆ ನೀರುಣಿಸುತ್ತದೆ. ಅನೇಕ ಬಾರಿ ಸಂಬಂಧಪಟ್ಟ ಕಬಿನಿ ಇಲಾಖೆಗೆ ಈ ಬಗ್ಗೆ ಹೇಳಿದರೂ ಇಲ್ಲಿನ ಅಧಿಕಾರಿಗಳು ಕೆರೆ ನೀರು ತುಂಬಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ರೈತರಿಗೆ ಸಬೂಬು ಹೇಳುತ್ತಿದ್ದಾರೆ.
ಕೆರೆಯ ಹೂಳು ತೆಗೆದಿಲ್ಲ ಹಾಗೂ ಕಳೆಗಿಡಗಳನ್ನು ಸ್ವಚ್ಛ ಮಾಡಿಲ್ಲ. ನಾಲೆಯಿಂದ ನೀರು ಸರಾಗವಾಗಿ ಹರಿದು ಬರಲು ನಾಲೆಗಳನ್ನು ಸಹ ದುರಸ್ತಿ ಪಡಿಸಿಲ್ಲ. ಹೀಗಾಗಿ ನಾಟಿ ಮಾಡಿ ಮುಕ್ತಾಯವಾದ ಬಳಿಕ ಕೆರೆ ತುಂಬುತ್ತದೆ. ಹೀಗಾದರೆ ನಾವು ಹೇಗೆ ಜೀವನ ನಡೆಸಬೇಕು? ವ್ಯವಸಾಯವೇ ನಮಗೆ ಆಧಾರ ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೆ ತುಂಬಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಕಬಿನಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರದ ಉಮೇಶ್, ಪುಟ್ಟರಾಜು, ಕೃಷ್ಣ , ಸಿದ್ದರಾಜು, ಕಿರಣ್, ಜಗದೀಶ್, ಶಿವಕುಮಾರ್, ನಾಗರಾಜು, ಶಂಕರ್ ಎಚ್ಚರಿಕೆ ನೀಡಿದರು.
ಈ ಭಾಗದಲ್ಲಿ ಸರಿಯಾದ ರೀತಿ ಮಳೆಯಾಗದ ಕಾರಣ ಕೆರೆ ನೀರು ತುಂಬಿಲ್ಲ. ಈಗಾಗಲೇ ಕಬಿನಿ ನೀರನ್ನು ನಾಲೆಯ ಮೂಲಕ ಬಿಡಲಾಗಿದೆ. ಕೂಡಲೇ ಕೆರೆ ತುಂಬಿಸುವ ಪ್ರಯತ್ನ ಮಾಡುತ್ತೇವೆಚಂದ್ರಕಾಂತ್ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.