ಕೊಳ್ಳೇಗಾಲ: ಪ್ರಸನ್ನ ವಿಶಾಲಾಕ್ಷಿ ಸಮೇತ ವಿಶ್ವನಾಥಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು.
ನಗರದ ಬಂಗಾರ ಶೆಟ್ಟರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಶಿವಯಾಗ ಪೂಜಾರಾಧನೆ, ಬಲಿಪ್ರದಾನ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದರು.
ಬಳಿಕ ಉತ್ಸವಮೂರ್ತಿಯನ್ನು ಅಗ್ರಹಾರ ಬೀದಿಯಲ್ಲಿ ಮಂಟಪೋತ್ಸವ ನಡೆಸಿ ನಂತರ ಅಲಂಕಾರಗೊಂಡಿದ್ದ ರಥದ ಸುತ್ತಲ್ಲೂ ಪ್ರದಕ್ಷಿಣೆ ಹಾಕಿ ರಥದ ಮೇಲೆ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ರಥೋತ್ಸವ ನಡೆಸಿದರು. ಬ್ರಹ್ಮರಥೋತ್ಸವದ ಹಿನ್ನೆಲೆ ದೇವಸ್ಥಾನವನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕರದೊಂದಿಗೆ ಅಲಂಕಾರ ಮಾಡಲಾಗಿತ್ತು.
ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಜ್ಯೋತಿಷಿ ಕೃಷ್ಣಕುಮಾರಶರ್ಮ ನಡೆಸಿಕೊಟ್ಟರು. ರಥೋತ್ಸವದಲ್ಲಿ ಬಂಗಾರಶೆಟ್ಟರ ದೇವಸ್ಥಾನ ಟ್ರಸ್ಟಿ ಡಾ.ಸಿ.ಪರಮೇಶ್ವರಯ್ಯ, ಕೆ.ವೇಣುಗೋಪಾಲ, ಎ.ಸಿ.ಚಂದ್ರಶೇಖರ್, ವಕೀಲ ಎಲ್.ಮಹದೇವಯ್ಯ, ಬಿ.ಎಸ್.ಗಣೇಶ್ ಕುಮಾರ್, ಆರ್.ನಾಗಪ್ರಕಾಶ್, ಸತೀಶ್ ಕುಮಾರ್, ಎ.ಪಿ.ಚೆನ್ನವೀರಶೆಟ್ಟಿ ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.