ADVERTISEMENT

ದೇಶದ ಅಭಿವೃದ್ಧಿಗಾಗಿ ಮೋದಿಗೆ ಮತ ಹಾಕಿ: ಮಲ್ಲೇಶ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:05 IST
Last Updated 24 ಏಪ್ರಿಲ್ 2024, 4:05 IST
ಅಮ್ಮನಪುರ ಮಲ್ಲೇಶ್‌
ಅಮ್ಮನಪುರ ಮಲ್ಲೇಶ್‌   

ಚಾಮರಾಜನಗರ: ‘ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ಕ್ಷೇತ್ರದ ಜನರು ಮತ ಹಾಕಬಾರದು. ದೇಶದ ಪ್ರಗತಿಯ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುವ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕು’ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಮಂಗಳವಾರ ತಿಳಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿಯವರು ದೇಶವನ್ನು 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಲು ಹೊರಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದ ನಂತರ ಈಗ ಕಾಶ್ಮೀರದಲ್ಲಿ ಕಲ್ಲು ತೂರಾಟ, ಹಿಂಸೆ ನಿಂತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳೂ ನಡೆಯುತ್ತಿವೆ’ ಎಂದರು. 

‘ಗಡಿ ಖ್ಯಾತೆ ಮೂಲಕ ಸದಾ ಕಾಡುತ್ತಿದ್ದ ಚೀನಾವನ್ನು ಭಾರತ ಈಗ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಚೀನಾ ಎಂದರೆ ಹೆದರುವ ಪರಿಸ್ಥಿತಿ ಇತ್ತು. ಆದರೆ, ಮೋದಿ ಸರ್ಕಾರ ಸೈನಿಕರಿಗೆ, ದೇಶದ ಜನರಿಗೆ ಧೈರ್ಯ ತುಂಬಿದೆ. ಚೀನಾಕ್ಕೆ ಪ್ರತಿರೋಧ ಒಡ್ಡುವ ರಾಷ್ಟ್ರವಾಗಿ ಭಾರತ ರೂಪುಗೊಂಡಿದೆ’ ಎಂದು ಹೇಳಿದರು. 

ADVERTISEMENT

ಮೇಕ್ ಇನ್ ಇಂಡಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ ಪ್ರೋತ್ಸಾಹ ಸಿಗುತ್ತಿದೆ. ನರೇಂದ್ರ ಮೋದಿ ಅವರಿಗೆ ಕನಸು ಇದೆ. ಚಾಮರಾಜನಗರದಲ್ಲಿ ಮೋದಿಯವರೇ ಅಭ್ಯರ್ಥಿ ಎಂದು ತಿಳಿದು ಬಾಲರಾಜು ಅವರಿಗೆ ಮತದಾನ ಮಾಡಬೇಕು. ಬಾಲರಾಜು ವಿದ್ಯಾವಂತ. ಒಳ್ಳೆಯ ವ್ಯಕ್ತಿ. ರಾಜಶೇಖರ ಮೂರ್ತಿ ಅವರ ಶಿಷ್ಯ. ಅವರನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗುತ್ತದೆ’ ಎಂದು ಮಲ್ಲೇಶ್‌ ಹೇಳಿದರು. 

ಮುಖಂಡರಾದ ನಟರಾಜು, ಶಿವರಾಜು, ನಲ್ಲೂರು ಪರಮೇಶ್, ನಂದೀಶ್, ಸುರೇಶ್ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.