ಗುಂಡ್ಲುಪೇಟೆ: ‘ಚಿತ್ರದುರ್ಗದ ಮದಕರಿ ನಾಯಕರ ಶೌರ್ಯ, ಸಾಹಸ, ಪರಾಕ್ರಮ ಸಮಾಜಕ್ಕೆ ಮಾದರಿ’ ಎಂದು ಸಬ್ ಇನ್ಸ್ಪೆಕ್ಟರ್ ಸಾಹೇಬಗೌಡ ತಿಳಿಸಿದರು.
ಪಟ್ಟಣದಲ್ಲಿ ಜಾರಕಿಹೊಳಿ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ವೀರ ಮದಕರಿ ನಾಯಕರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಚಿತ್ರದುರ್ಗದ ಕೊನೆಯ ಅರಸ ವೀರ ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ನಿರ್ಣಯಗಳು ಚಿತ್ರದುರ್ಗದ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲಿ ಹರಡಲು ಕಾರಣವಾದವು’ ಎಂದು ಹೇಳಿದರು.
‘ಏಳು ಸುತ್ತಿನ ಕೋಟೆಯನ್ನು ಆಳಿದ ಸ್ವಾಭಿಮಾನಿ, ಸಾಹಸಿ, ನಿರ್ಭೀತ ನಡೆಯ ಮದಕರಿ ನಾಯಕರು ಚಿತ್ರದುರ್ಗದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭಿಕ್ಷೆಯಿಂದ ಇಟ್ಟುಕೊಳ್ಳಲು ವಿಭಿನ್ನ ಯೋಜನೆಗಳನ್ನು ರೂಪಿಸಿದ್ದರು. ಐತಿಹಾಸಿಕ ಚಿತ್ರದುರ್ಗದ ಕೋಟೆ ಸುತ್ತಲು ಕೆರೆ–ಕಟ್ಟೆ, ಮಠ ಮಂದಿರಗಳನ್ನು ನಿರ್ಮಿಸಿ ಎಲ್ಲಾ ಧರ್ಮ, ಜಾತಿಯವರಿಗೂ ಮಾನ್ಯತೆ ನೀಡಿ, ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು’ ಎಂದರು.
ಮುಖಂಡ ರಾಜೇಂದ್ರ ಮಾತನಾಡಿ, ‘ಅನೇಕ ದೇವಾಲಯಗಳನ್ನು ನಿರ್ಮಿಸುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಮದಕರಿ ನಾಯಕರ ಸ್ಮಾರಕವನ್ನು ಸರ್ಕಾರವು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಕ್ರೇಜಿ ನಾಗರಾಜು, ರಾಜೇಂದ್ರ ವಿ.ನಾಯಕ, ಹುಲುಸಗುಂದಿ ಮುತ್ತಣ್ಣ, ಪುರಸಭಾ ಮಾಜಿ ಸದಸ್ಯ ಸಿದ್ದಯ್ಯ, ರವಿದೊರೆ, ವೇಣು ಸಲಗಾರ್, ಮುನೇಶ್, ಕಾರ್ ರಮೇಶ್, ಬೇರಂಬಾಡಿ ರಂಗಪ್ಪನಾಯಕ, ವರದನಾಯಕ, ಹೊಸೂರು ಸಂತೋಷ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.