
ಯಳಂದೂರು: ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ಶಿವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಗಳಲ್ಲಿ ಭಾಗಿಯಾದರು.
ನಸುಕಿನಿಂದಲೇ ದೇಗುಲಬಣ್ಣದ ರಂಗೋಲಿ ಇಟ್ಟು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆಗಮಿಕರು ಬಿಲ್ವಪತ್ರೆ ಹಾಗೂ ಹೂವು, ಹಾರಗಳಿಂದ ಸಿಂಗರಿಸಿ, ಶಿವಲಿಂಗಕ್ಕೆ ರುದ್ರಾಭಿಷೇಕ ನೆರವೇರಿಸಿದರು. ಪಂಚಾಮೃತ ಹಾಗೂ ಎಳೆನೀರು ಅಭಿಷೇಕ ಮಾಡಿ, ಕರ್ಪೂರದ ಆರತಿ ಬೆಳಗಿದರು. ಭಕ್ತರು ದರ್ಶನ ಪಡೆದರು.
ಪಟ್ಟಣದ ಗೌರೀಶ್ವರ ದೇವಳದಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು. ಪಂಚಲಿಂಗಗಳಿಗೆ ಪೂಜೆ ಸಲ್ಲಿಸಿದ ಭಕ್ತರು ಹಣ್ಣು ಕಾಯಿ ಸಮರ್ಪಿಸಿ, ಪ್ರಸಾದ ಸ್ವೀಕರಿಸಿದರು. ಆಮೆಕೆರೆ ರಸ್ತೆಯ ಗಜಾನನ ಕ್ಷೇತ್ರದ ಶಿವ , ಪಾರ್ವತಿ ಮಂದಿರದಲ್ಲಿ ನೂರಾರುಮಂದಿ ದರ್ಶನ ಪಡೆದರು. ಸಂಜೆ ನಡೆದ ಉತ್ಸವದಲ್ಲಿ ಗ್ರಾಮಸ್ಥರು ಭಾಗಿಯಾಗಿ, ಪಂಚಾಮೃತ ಸೇವೆ ಸಮರ್ಪಸಿದರು.
ಮಾಂಬಳ್ಳಿ ವೈದ್ಯನಾಥೇಶ್ವರ ಹಾಗೂ ಕಂದಹಳ್ಳಿ ಮಹದೇಶ್ವರ ದೇವಳಗಳಲ್ಲಿ ಭಕ್ತರು ದಿನವಿಡೀ ಉಪವಾಸ ಇದ್ದು, ಹಣ್ಣು, ಕಾಯಿ ಪೂಜೆ ಅರ್ಪಿಸಿದರು. ಶಿವರಾತ್ರಿಯಂದು ಶಿವನ ಮಂಗಳಮೂರ್ತಿಗೆ ಬಿಲ್ವಪತ್ರೆ ಅರ್ಪಸಿ, ಧ್ಯಾನ, ತಪಗಳಲ್ಲಿ ನಿರತರಾಗಿ, ರಾತ್ರಿಪೂರ ಶಿವಧ್ಯಾನದ ಜಾಗರಣೆ ಮಾಡುವುದರಿಂದ ಭಕ್ತರಿಗೆ ಒಳಿತಾಗುತ್ತದೆ ಎಂಬ ಪ್ರತೀತಿ ಇದೆ’ ಎಂದು ಅರ್ಚಕ ಚಂದ್ರಮೌಳಿ ಹೇಳಿದರು.
ಗ್ರಾಮೀಣ ದೇವಸ್ಥಾನಗಳಲ್ಲಿ ಶಿವನಾಮಾಮೃತ, ಭಜನೆ, ಕಥಾ ಕಾಲಕ್ಷೇಪ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ತೊಟ್ಟು ಶಿವ ದೇಗುಲಗಳಿಗೆ ತೆರಳಿ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.