ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಮಹದೇಶ್ವರ ದೇವಾಲಯದಲ್ಲಿ ಶನಿವಾರ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ನಡೆದ ರಥೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡರು. ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು.
ಕಾರ್ತಿಕ ಶುದ್ಧ ಪಾಡ್ಯ ವಿಶಾಖ ನಕ್ಷತ್ರದಲ್ಲಿ ಪೂಜೆಗೆ ಚಾಲನೆ ನೀಡಲಾಯಿತು. ನೂರಾರು ಗ್ರಾಮಗಳಿಂದ ಬಂದಿದ್ದ ಭಕ್ತರು ಸಮೀಪದ ಸುವರ್ಣ ನದಿಯಲ್ಲಿ ಮಿಂದು ಮಡಿಯುಟ್ಟು ದೇವರ ದರ್ಶನ ಪಡೆದರು. ಮಧ್ಯಾಹ್ನ ಮಹದೇಶ್ವರ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ, ಫಲ, ಪುಷ್ಪಗಳ ಅಲಂಕಾರ ಮಾಡಿ, ತೇರಿಗೆ ಚಾಲನೆ ನೀಡಲಾಯಿತು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳ್ಳಿ ದಂಡಕ ಹೊತ್ತು, ರಥ ಸಾಗುವ ಹಾದಿಯಲ್ಲಿ ಧೂಪ ಮತ್ತು ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು. ಮಂಗಳವಾದ್ಯ ಮೊಳಗುತ್ತಿದ್ದಂತೆ ಮಹದೇಶ್ವರನನ್ನು ಸ್ತುತಿಸಲಾಯಿತು. ಭಕ್ತರು ಉಘೇ ಮಾದಪ್ಪ ಜಯಘೋಷಗಳ ನಡುವೆ ಗುಡಿ ಸುತ್ತಲೂ ಮೆರವಣಿಗೆ ಸಾಗಿತು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಮಕ್ಕಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು, ತೀರ್ಥ ಪ್ರಸಾದ ಸೇವಿಸಿ, ಧನ್ಯತೆ ಮೆರೆದರು.
ದೇವಾಲಯದ ಆಡಳಿತ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಕ್ತರಿಗೆ ನೆರವಾದರು. ತೇರಿನ ಉತ್ಸವದಲ್ಲಿ ಪಾಲ್ಗೊಂಡವರಿಗೆ ಲಾಡು ಪ್ರಸಾದ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.