ADVERTISEMENT

ಯಳಂದೂರು | ಕೆಸ್ತೂರಿನಲ್ಲಿ ಮಖಾ ಮಳೆ ಹಬ್ಬ: ಗ್ರಾಮಸ್ಥರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:34 IST
Last Updated 21 ಆಗಸ್ಟ್ 2025, 4:34 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಬುಧವಾರ ಮಖಾ ಮಳೆ ಹಬ್ಬದ ಅಂಗವಾಗಿ ಸುಡುಗಾಡಮ್ಮ ದೇವಿಗೆ ಮುಂಜಾನೆ ವಿಶೇಷ ಪೂಜೆ ಹಾಗೂ ಕೆಂಡಾರ್ಚನೆ ಸಲ್ಲಿಸಲಾಯಿತು
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಬುಧವಾರ ಮಖಾ ಮಳೆ ಹಬ್ಬದ ಅಂಗವಾಗಿ ಸುಡುಗಾಡಮ್ಮ ದೇವಿಗೆ ಮುಂಜಾನೆ ವಿಶೇಷ ಪೂಜೆ ಹಾಗೂ ಕೆಂಡಾರ್ಚನೆ ಸಲ್ಲಿಸಲಾಯಿತು   

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಬುಧವಾರ ಮಖಾ ಮಳೆ ಹಬ್ಬದ ಅಂಗವಾಗಿ ಸುಡುಗಾಡಮ್ಮ ದೇವಿಗೆ ಮುಂಜಾನೆ ವಿಶೇಷ ಪೂಜೆ, ಉತ್ಸವ ಹಾಗೂ ಕೆಂಡಾರ್ಚನೆ ನಡೆಸಲಾಯಿತು.

ಭಕ್ತರು ಹಬ್ಬಕ್ಕೂ ಮೊದಲು ಮನೆಗಳನ್ನು ಶುಚಿಗೊಳಿಸಿ, ಗ್ರಾಮವನ್ನು ತೋರಣಗಳಿಂದ ಅಲಂಕರಿಸಿ, ಭಕ್ಷ್ಯಗಳನ್ನು ಗುಡಿಗೆ ತರುವ ಮೂಲಕ ಮಳೆ ಹಬ್ಬಕ್ಕೆ ಚಾಲನೆ ನೀಡಿದರು.

ಹಬ್ಬದ ಅಂಗವಾಗಿ ದೇವರ ಮುಂದೆ ಶುದ್ಧ ಜಲವನ್ನು ಇಟ್ಟು, ಹತ್ತಾರು ಬಗೆಯ ಹೂವಿನ ಹಾರಗಳಿಂದ ಅಲಂಕರಿಸಿ, ಹಲವಾರು ರೀತಿಯ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು. ಮಖ ನಕ್ಷತ್ರದಲ್ಲಿ ಹಬ್ಬಕ್ಕೆ ಹೆಚ್ಚಿನ ಮಹತ್ವ ಇದ್ದು, ಮಳೆ ಸಮೃದ್ಧಿಗಾಗಿ ವರುಣನನ್ನು ಸ್ಮರಿಸಲಾಗುತ್ತದೆ. ಮಳೆ ಹಬ್ಬದ ನಿಮಿತ್ತ ವಿಶೇಷ ಭಕ್ಷ್ಯಗಳನ್ನು ತಯಾರಿಸಿ, ದೇವರಿಗೆ ಎಡೆ ಇಟ್ಟು ಅರ್ಚನೆ ಮಾಡಲಾಗುತ್ತದೆ. ನಂತರ ಮಹಿಳೆಯರು ಮತ್ತು ಮಕ್ಕಳು ವಿಶೇಷ ಪೂಜೆ ಸಲ್ಲಿಸುತ್ತಾರೆ. ಗ್ರಾಮಸ್ಥರು ಮನೆಮನೆಗೆ ಪ್ರಸಾದ ವಿತರಿಸುವ ವಾಡಿಕೆ ಇಲ್ಲಿದೆ.

ADVERTISEMENT

ಮಂಗಳವಾರ ರಾತ್ರಿ ದೇವತೆಗೆ ಆಭರಣ ತೊಡಿಸಲಾಯಿತು. ದೇವರ ಮುಂದೆ ಒಂಬಾಳೆ ಬಿಡಿಸಿ, ಎಳೆನೀರು ಎರೆದು, ಧೂಪ ದೀಪಗಳಿಂದ ನೈವೇದ್ಯ ಮಾಡಲಾಯಿತು. ಕೋಳಿಯೊಂದನ್ನು ದೇವರ ಮುಂದೆ ನಿಲ್ಲಿಸಿ ತೀರ್ಥ ಹಾಕಿ ನಮಿಸಲಾಯಿತು. ಹೊಸ ಮಡಿಕೆಯಲ್ಲಿ ಸಿಹಿ ಹಾಗೂ ಕಾರದ ಅಡುಗೆ ಮಾಡುವ ಸಂಪ್ರದಾಯ ಪಾಲಿಸಲಾಯಿತು. ಮುಂಜಾನೆ ಎಡೆಯನ್ನು ದೇವರಿಗೆ ಅರ್ಪಿಸಲಾಯಿತು. ಭಕ್ತಾದಿಗಳು ಸೂರ್ಯೋದಯಕ್ಕೂ ಮೊದಲು ಕುಲಸ್ಥರ ಸಮ್ಮುಖದಲ್ಲಿ ಅನ್ನ ಪ್ರಸಾದ ಸೇವಿಸಿದರು ಎಂದು ಗ್ರಾಮದ ಯಜಮಾನ ಬಿ. ನಾಗರಾಜು ತಿಳಿಸಿದರು.

ಸುಡುಗಾಡಮ್ಮ ಸೇವಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ, ಪದಾಧಿಕಾರಿಗಳಾದ ಎಂ.ನಾಗರಾಜು, ಮಾದಪ್ಪ, ನಾಗರಾಜು, ಮಹೇಶ್, ಚಿಕ್ಕ ಬಸವಯ್ಯ, ನವೀನ್, ಮಹೇಶ್, ನಾರಾಯಣ್, ಕಿರಣ್, ಅರಣ್ಯ ಇಲಾಖೆ‌ ಬಸವರಾಜು, ಶಾಂತರಾಜು, ಕೆ.ಚಿನ್ನಸ್ವಾಮಿ, ಪೂಜಾರಿ ರಂಗರಾಜು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.