ADVERTISEMENT

‘ಪ್ರಾಚೀನ ಮಂದಿರಗಳ ಜೀರ್ಣೋದ್ಧಾರ ಪುಣ್ಯದ ಕಾರ್ಯ’

ಮಲೆಯೂರಿನಲ್ಲಿ ಭಗವಾನ್ 1008 ಆದಿನಾಥ ತೀರ್ಥಂಕರರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:14 IST
Last Updated 1 ನವೆಂಬರ್ 2025, 4:14 IST
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಶಿಲಾ ಬಸದಿ ಭಗವಾನ್ 1008 ಆದಿನಾಥ ತೀರ್ಥಂಕರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠೆ ಹಾಗೂ ಧಾಮ ಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಪೂಜಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಶಿಲಾ ಬಸದಿ ಭಗವಾನ್ 1008 ಆದಿನಾಥ ತೀರ್ಥಂಕರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠೆ ಹಾಗೂ ಧಾಮ ಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಪೂಜಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು   

ಚಾಮರಾಜನಗರ: ನಾಡಿನಾದ್ಯಂತ ಪ್ರಾಚೀನ ಮಂದಿರಗಳ ಜೀರ್ಣೋದ್ಧಾರ ಮಾಡುವಂತಹ ಪುಣ್ಯಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ಲಭಿಸಿರುವುದು ಸಂತಸ ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್, ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ, ಧಾ‌ರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಶಿಲಾ ಬಸದಿ ಭಗವಾನ್ 1008 ಆದಿನಾಥ ತೀರ್ಥಂಕರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠೆ ಹಾಗೂ ಧಾಮ ಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಪೂಜಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಜ–ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡು ಶಿಥಿಲಾವಸ್ಥೆ ತಲುಪಿರುವ ಮಂದಿರಗಳ ಜೀರ್ಣೋದ್ಧಾರ ಸಮಾಜದ ಕರ್ತವ್ಯವಾಗಿದ್ದು ಎಲ್ಲರೂ ಸಹಕಾರ ನೀಡಬೇಕು. ಹೊಸ ಮಂದಿರಗಳ ನಿರ್ಮಾಣಕ್ಕಿಂತ ಹಳೆಯ ದೇವಾಲಯಗಳ ಜೀರ್ಣೊದ್ಧಾರ ಹೆಚ್ಚು ಮಹತ್ವದ್ದು. ದೇಗುಲಗಳ ಜೀರ್ಣೋದ್ಧಾರ ಮಾಡುವಾಗ ಶೈವ ಹಾಗೂ ವೈಷ್ಣವರ ದೇವಾಲಗಳು ಎಂಬುದನ್ನು ನೋಡದೆ ಜೀರ್ಣೋದ್ಧಾರಕ್ಕೆ ಮಾತ್ರ ಒತ್ತು ನೀಡಲಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿ ವರ್ಷ ಜ.14 ಹಾಗೂ ಆ.15ರಂದು ದೇವಸ್ಥಾನಗಳ ಸ್ಚಚ್ಛತೆಗೆ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಮಲೆಯೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಜೈನ ಬಸದಿ ಸುಂದರವಾಗಿ‌‌ ನಿರ್ಮಾಣಗೊಂಡಿದೆ. ಆದಿನಾಥ ಜೈನಸೇವಾ ಟ್ರಸ್ಟ್ ಪದಾಧಿಕಾರಿಗಳು‌ ದೇವಾಲಯದ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು‌ ಎಂದು‌ ಸಲಹೆ ನೀಡಿದರು.

ಮಂಡ್ಯ ಜಿಲ್ಲೆಯ ಆರತಿಪುರ ಜೈನಮಠದ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿರುವಷ್ಟು ಸ್ವಾರ್ಥ, ಲಾಲಸೆ ಪ್ರಾಣಿಗಳಲ್ಲಿ ಕಾಣಲು ಸಾಧ್ಯವಿಲ್ಲ. ಜಗತ್ತಿನ‌ ಎಲ್ಲ‌ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು ಬದುಕಿದಷ್ಟು ದಿನ ಅನ್ಯರಿಗೆ ಕೇಡು ಬಯದೆ ಉಪಕಾರಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಶ್ರ‌ವಣ ಬೆಳಗೊಳದ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಧರ್ಮಸ್ಥಳ‌ ಧರ್ಮೊತ್ಥಾನ‌ ಟ್ರಸ್ಟ್‌ನ ನೇಮಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರ‌ವಣಬೆಳಗೊಳದ ಜೈನ್ ಬೀಟ್ ತಂಡದಿಂದ ಗೀತಗಾಯನ ನಡೆಯಿತು.

ರಾಜಾವಳಿ ಸಭಾಮಂಟಪದಲ್ಲಿ ಗರ್ಭಾವತಾರ ಕಲ್ಯಾಣ, ಜನಮಾತೆಗೆ ಸೀಮಂತ ಆರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿದವು.
ರಾಷ್ಟ್ರಿಯ ಜೈನ್ ಮಿಲನ್‌ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್, ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ದಾ ಅಮಿತ್, ಮಾಜಿ ಶಾಸಕ ಸಿ.ಎಸ್.ನಿರಂಜನ ಕುಮಾರ್, ಭಗವಾನ್ 1008 ಆದಿನಾಥ ತೀರ್ಥಂಕರ ದಿಗಂಬರ ಜೈನಸೇವಾ ಟ್ರಸ್ಟ್ ಅಧ್ಯಕ್ಷ ವಸುಪಾಲ್, ಪದಾಧಿಕಾರಿಗಳು, ಮಲೆಯೂರು ಗ್ರಾಮಸ್ಥರು, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಿಬ್ಬಂದಿ, ಸ್ವಸಹಾಯ ಸಂಘಗಳ ಸದಸ್ಯರು, ಜೈನಸಮಾಜದವರು‌ ಕಾರ್ಯಕ್ರಮದಲ್ಲಿ ಇದ್ದರು.

ಪಂಚೇಂದ್ರಿಯಗಳ ನಿಗ್ರಹದಿಂದ ಯೋಗ ಪ್ರಾಪ್ತಿ’

ಪಂಚೇದ್ರಿಯಗಳನ್ನು ನಿಗ್ರಹಿಸಿ ಜಯ ಸಾಧಿಸುವವರಿಗೆ ಮಾತ್ರ ಪಂಚಕಲ್ಯಾಣ ಯೋಗ ಪ್ರಾಪ್ತವಾಗುತ್ತದೆ. ನಮ್ಮೊಳಗಿರುವ ದೋಷಗಳನ್ನು‌‌ ಕಳೆದುಕೊಂಡರೆ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು. ಕನ್ನಡ ಸಾಹಿತ್ಯದಲ್ಲಿ ಪಂಚಕಲ್ಯಾಣಗಳು ಕವಿಗಳಿಗೆ ವರ್ಣನೆಯ ಹಬ್ಬವಾದರೆ ಸಮಾಜಕ್ಕೆ ಆಚರಣೆಯ ಹಬ್ಬವಾಗಿದೆ. ಪಂಪ ರನ್ನ ಪೊನ್ನ ಜನ್ನ ನಾಗಚಂದ್ರ ಕವಿಗಳು ತಮ್ಮ ಕಾವ್ಯಗಳಲ್ಲಿ‌ ಪಂಚಕಲ್ಯಾಣಗಳಿಗೆ ಒತ್ತು ನೀಡಿರುವುದನ್ನು ಕಾಣಬಹುದು ಎಂದು ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.