ಚಾಮರಾಜನಗರ: ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿರುವಂತೆಯೇ, ಕೆಲವು ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯಲ್ಲಿ ಏರಿಕೆ ಕಂಡಿದೆ.
ತರಕಾರಿ, ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.
ಹೂವುಗಳ ಪೈಕಿ, ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರದ ಬೆಲೆ ₹1000ಕ್ಕೆ ಏರಿಕೆಯಾಗಿದೆ ಕಳೆದ ವಾರ ₹600 ಇತ್ತು.ಮಲ್ಲಿಗೆಯ ಬೆಲೆ ₹240ರಿಂದ ₹120ಕ್ಕೆ ಇಳಿದಿದೆ. ಚೆಂಡು ಹೂವುಗಳ ಪೈಕಿ ಹಳದಿ ಬಣ್ಣದ್ದಕ್ಕೆ ಕೆಜಿಗೆ ₹40 ಇದೆ. ಭಾರಿ ಪ್ರಮಾಣದಲ್ಲಿ ಕೆಂಪು ಬಣ್ಣದ ಹೂವಿಗೆ ₹20 ಬೆಲೆ ಇದೆ. ಸುಗಂಧರಾಜ ಹೂವಿನ ಬೆಲೆ ₹80ರಿಂದ ₹100 ಇದೆ.
‘ಶ್ರಾವಣ ಮಾಸ ಆರಂಭವಾದ ನಂತರ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸಮಯದಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಬೆಳ್ಳುಳ್ಳಿ ಬೆಲೆ ಮಾತ್ರ ₹20 ಹೆಚ್ಚಾಗಿದೆ. ಹಾಪ್ಕಾಮ್ಸ್ನಲ್ಲಿ ಕೆಜಿಗೆ ₹60ರಿಂದ ₹80ರವರೆಗೆ ಇದೆ.
ಟೊಮೆಟೊ (₹20), ಬೀನ್ಸ್ (₹25–30), ಈರುಳ್ಳಿ (₹16–18) ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ.
ಎರಡು ಮೂರು ವಾರಗಳಿಂದ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಆಧರಿಸಿದ ಕೊಂಚ ಏರಿಕೆಯಾದರೂ ಆಗಬಹುದು ಎಂದು ವ್ಯಾಪಾರಿ ಮಧು ಅವರು ಹೇಳಿದರು.
ದಾಳಿಂಬೆ ಇಳಿಕೆ: ಹಣ್ಣುಗಳ ಪೈಕಿ ದಾಳಿಂಬೆಯ ಬೆಲೆ ಕೆಜಿಗೆ ₹20 ಇಳಿಕೆಯಾಗಿದೆ. ಎರಡು ತಿಂಗಳಿಂದ ₹80ರಿಂದ ₹100ರವರೆಗೆ ಇದ್ದ ದಾಳಿಂಬೆ ಬೆಲೆ ಈ ವಾರ ₹60ರಿಂದ ₹80ರವರೆಗೆ ಇದೆ.
ಸೇಬಿನ ದುಬಾರಿ ದರ (₹160–180) ಈ ವಾರವೂ ಮುಂದುವರಿದಿದೆ. ಏಲಕ್ಕಿ ಬಾಳೆಗೂ ಬೇಡಿಕೆ ಇದ್ದು, ₹40–₹50ರವರೆಗೆ ಬೆಲೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.