ADVERTISEMENT

ಪ್ರತ್ಯೇಕ ರಾಜ್ಯ: ಉಮೇಶ ಕತ್ತಿ ಹೇಳಿಕೆ ಕೊಡಬಾರದಿತ್ತು– ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 13:23 IST
Last Updated 25 ಜೂನ್ 2022, 13:23 IST
ವಿ.ಸೋಮಣ್ಣ
ವಿ.ಸೋಮಣ್ಣ   

ಚಾಮರಾಜನಗರ: ‘ಸಚಿವ ಉಮೇಶ ಕತ್ತಿ ಅವರು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಕೆಲವು ಬಾರಿ ಪ್ರತ್ಯೇಕ ರಾಜ್ಯ ರಚನೆಯಂತಹ ಹೇಳಿಕೆ ನೀಡುತ್ತಾರೆ.ನಮ್ಮ ಪಕ್ಷದ ಹಿರಿಯ ನಾಯಕನಾಗಿ ಅವರಯ ಈ ರೀತಿ ಹೇಳಿಕೆ ಕೊಡಬಾರದಿತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಹೇಳಿದರು.

ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಕತ್ತಿ ಅವರ ಹೇಳಿಕೆಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ , ‘ಅವರು ನನ್ನ ಸ್ನೇಹಿತರು. ಬುದ್ಧಿವಂತರು. ಎಂಟು ಬಾರಿ ಶಾಸಕರಾಗಿದ್ದಾರೆ. ಅವರು ನಿಷ್ಠುರವಾದಿಯಲ್ಲ. ಅವರ ಜೊತೆ ಮಾತನಾಡುತ್ತೇನೆ’ ಎಂದರು.

ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೈಗೊಳ್ಳಲಾದ ಕಳಪೆ ರಸ್ತೆ ಕಾಮಗಾರಿ ಬಗ್ಗೆ ಕೇಳಿದ್ದಕ್ಕೆ, ‘ಈ ಬಗ್ಗೆ ಪ್ರಧಾನಿ ಅವರೇ ವರದಿ ಕೇಳಿದ್ದಾರೆ. ಕಾಮಗಾರಿಯನ್ನು ನಾನು ನೋಡಿಲ್ಲ. ನನ್ನ ಕ್ಷೇತ್ರದಲ್ಲಿ ನಡೆದಿಲ್ಲ. ಪಕ್ಕದ ಕ್ಷೇತ್ರದಲ್ಲಿ ನಡೆದಿದೆ. ಈಗ ಪ್ರಧಾನಿ ಕಚೇರಿಯೇ ವರದಿ ಕೇಳಿರುವುದರಿಂದ ಯಾವುದನ್ನೂ ಮರೆಮಾಚಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅವರು ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ‌’ ಎಂದು ಉತ್ತರಿಸಿದರು.

ADVERTISEMENT

‘ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರ ಪತನಗೊಳ್ಳುವುದರಿಂದ ಯಾರಿಗೆ ಖಷಿಯಾಗಿದೆಯೋ ಗೊತ್ತಿಲ್ಲ. ಆದರೆ ಬಾಳಾ ಠಾಕ್ರೆ ಮಾತ್ರ ಖುಷಿ ಪಡುತ್ತಾರೆ.ಶಿವಸೇನೆಗೂ ಕಾಂಗ್ರೆಸ್‌ಗೂ ಏನು ಸಂಬಂಧ?ಅವರಿಬ್ಬರೂ ಎಣ್ಣೆ ಸೀಗೆಕಾಯಿಯಂತೆ ಇದ್ದವರು.ಅವರಿಬ್ಬರೂ ಹೇಗೆ ಒಂದಾದರು?ಕಾಂಗ್ರೆಸ್‌ನವರು 75 ವರ್ಷ ಆಳಿದ್ದಾರೆ.ಪೀಳಿಗೆ ಬದಲಾವಣೆಯಾದಂತೆ ಸರ್ಕಾರಗಳು ಬದಲಾಗುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಸೋಮಣ್ಣ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.