ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಭಕ್ತರ ಅನುಪಸ್ಥಿತಿಯಲ್ಲಿ ಕಡೇ ಕಾರ್ತೀಕ ವಿಶೇಷ ಪೂಜೆ, ಮಹಾ ಜ್ಯೋತಿ, ತೆಪ್ಪೋತ್ಸವ ನಡೆಯಲಿದೆ.
ಕೋವಿಡ್ ಕಾರಣದಿಂದ ಶನಿವಾರದಿಂದ (ಡಿ.12) ಸೋಮವಾರದವರೆಗೂ (ಡಿ.14)ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಾರ್ತೀಕ ಜಾತ್ರೋತ್ಸವದ ಅಂಗವಾಗಿ ಶನಿವಾರದಿಂದ ವಿಶೇಷ ಪೂಜೆ, ಎಣ್ಣೆ ಮಜ್ಜನ ಸೇವೆ ನಡೆದಿವೆ.ಜಾತ್ರೆಯ ಕೊನೆ ದಿನವಾದ ಸೋಮವಾರ ಮಹಾಜ್ಯೋತಿ ಬೆಳಗುವುದು ಹಾಗೂ ತೆಪ್ಪೋತ್ಸವ ಜರುಗಲಿದೆ.
ಭಣ ಭಣ: ಈ ಹಿಂದೆ ದಸರಾ ಜಾತ್ರೆ ಹಾಗೂ ದೀಪಾವಳಿ ಜಾತ್ರೆಯ ಸಂದರ್ಭಗಳಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಕಾರ್ತೀಕ ಮಾಸದ ಜಾತ್ರೆಗೂ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಕೋವಿಡ್ ಕಾರಣದಿಂದಾಗಿ ಈ ಬಾರಿ, ದೇವಾಲಯದ ಮಟ್ಟಿಗೆ ಸಾಂಪ್ರದಾಯಿಕವಾಗಿ ಪೂಜೆ ಪುನಸ್ಕಾರಗಳು ನಡೆದಿವೆ. ಭಕ್ತರಿಲ್ಲದೇ ದೇವಾಲಯದ ಆವರಣ ಭಣಗುಡುತ್ತಿದೆ.
ಸೋಮವಾರ ಸಂಜೆ ಮಹದೇಶ್ವರ ಸ್ವಾಮಿಯ ಉತ್ಸವವನ್ನು ಮೆರವಣಿಗೆ ಮಾಡಿ, ಉತ್ಸವ ಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಪೂಜೆಯನ್ನು ನೆರವೇರಿಸಿ ಮಹಾ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಬಳಿಕ ರಾತ್ರಿ 9ರಿಂದ 10 ಗಂಟೆಯ ಸುಮಾರಿನಲ್ಲಿ ತೆಪ್ಪೋತ್ಸವ ಜರುಗಲಿದೆ.
‘ಭಕ್ತರು ಇಲ್ಲದಿದ್ದರೂ, ಸಾಂಪ್ರದಾಯಿಕವಾಗಿ ಎಲ್ಲ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರವೂ ಮಹಾ ಜ್ಯೋತಿ ಬೆಳಗಿಸುವುದು, ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯರು, ದೇವಾಲಯದ ಸಿಬ್ಬಂದಿ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.