ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಮಧ್ಯಾಹ್ನದಿಂದ ಸಂಜೆಯ ನಡುವೆ ಸಾಧಾರಣ ಮಳೆಯಾಗಿದೆ.
ಎರಡು ದಿನಗಳಿಂದ ದೂರವಾಗಿದ್ದ ಮಳೆ, ಗುರುವಾರ ಮತ್ತೆ ಸುರಿದಿದೆ. ಗುಂಡ್ಲುಪೇಟೆ, ಹನೂರು ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಸುರಿದಿದೆ.
ಜಿಲ್ಲಾ ಕೇಂದ್ರ ಚಾಮರಾಜನಗರ ಹಾಗೂ ಸುತ್ತಮುತ್ತ ಮಧ್ಯಾಹ್ನ 2.30ರ ಸುಮಾರಿಗೆ ಕೆಲ ಕಾಲ ಮಳೆ ಬಿದ್ದಿದೆ.
ಸಂತೇಮರಹಳ್ಳಿಹೋಬಳಿಯಾದ್ಯಂತ ಕೆಲವು ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಅರ್ಧ ತಾಸು ಮಳೆ ಸುರಿದಿದೆ.
ಹೊಂಗನೂರು, ಮಸಣಾಪುರ, ಇರಸವಾಡಿ, ಗೂಳಿಪುರ ಕುದೇರು, ಉಮ್ಮತ್ತೂರು, ದೇಮಹಳ್ಳಿ, ಮೂಡಲ ಅಗ್ರಹಾರ ಈಭಾಗಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಸಂತೇಮರಹಳ್ಳಿ, ಕೆಂಪನಪುರ ಹಾಗೂ ಸುತ್ತಮುತ್ತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ.
ಹನೂರು ವರದಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಒಂದು ತಾಸಿಗೂ ಹೆಚ್ಚು ಕಾಲ ಸಾಧಾರಣ ಮಳೆಯಾಯಿತು.
ಬೆಳಿಗ್ಗೆಯಿಂದಲೇ ಮೋಡ ಕವಿದ ವಾತವರಣವಿದ್ದು, ಆಗಾಗ್ಗೆ ತುಂತುರು ಹನಿಯಾಗಿ ಬೀಳುತ್ತಿದ್ದ ಮಳೆ, ಮಧ್ಯಾಹ್ನದ ಹೊತ್ತಿಗೆ ಬಿರುಸುಗೊಂಡು ಅರ್ಧ ತಾಸಿಗೂ ಹೆಚ್ಚು ಕಾಲ ಸುರಿಯಿತು. ಹನೂರು, ಲೊಕ್ಕನಹಳ್ಳಿ, ರಾಮಾಪುರ ಹಾಗೂ ಮಾರ್ಟಳ್ಳಿ, ಮಂಗಲ, ಕಣ್ಣೂರು, ಚೆನ್ನಾಲಿಂಗನಹಳ್ಳಿ ಮುಂತಾದ ಕಡೆ ಒಂದು ತಾಸಿಗೂ ಹೆಚ್ಚು ಹೊತ್ತು ವರ್ಷಧಾರೆ ಸುರಿದಿದೆ.
ಗುಂಡ್ಲುಪೇಟೆ ವರದಿ:ತಾಲ್ಲೂಕಿನ ವಿವಿಧೆಡೆ ಗಂಟೆಗೂ ಅಧಿಕ ಕಾಲ ಜೋರು ಮಳೆ ಸುರಿದ ಪರಿಣಾಮ ಭೂಮಿ ತಂಪಾಯಿತು. ಕೆಲವು ದಿನಗಳಿಂದ ಗುಂಡ್ಲುಪೇಟೆ ಭಾಗದಲ್ಲಿ ಮಳೆ ಕಣ್ಣಾಮುಚ್ಚಾಲೆಯಾಡುತ್ತಿತ್ತು.
ತೆರಕಣಾಂಬಿ, ಬೇಗೂರು, ಗುಂಡ್ಲುಪೇಟೆ, ಹಂಗಳ ಹೋಬಳಿ ಸೇರಿದಂತೆ ಬಂಡೀಪುರ ಕಾಡಂಚಿನ ಹಲವು ಗ್ರಾಮಗಳಲ್ಲಿ ಮಳೆಯಾಗಿದ್ದು, ಜಮೀನಿನ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗದೇ ಇದ್ದುದರಿಂದ ಬೆಳೆಗಳು ಬಾಡಿ ಹೋಗಿದ್ದವು. ಗುರುವಾರ ಮಧ್ಯಾಹ್ನ ಸುರಿದ ಉತ್ತಮ ಮಳೆಯಿಂದ ರೈತರ ಜಮೀನುಗಳಿಗೆ ಜೀವಕಳೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.