ADVERTISEMENT

ಎತ್ತನ್ನು ಕುದುರೆ ಮಾಡುವ ಕಾಯಕಕ್ಕೆ ಏದುಸಿರು!

ಬಳೇಪೇಟೆಯ ಲಾಳದ ಸಾಹೇಬರಿಗೆ ಸಾಹಿತ್ಯ ಪ್ರಶಸ್ತಿಯ ನಂಟು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 7:05 IST
Last Updated 5 ಸೆಪ್ಟೆಂಬರ್ 2021, 7:05 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇವಾಲಯದ ಬಳಿ ನಾಲು ಕಟ್ಟುವ ಕಾಯಕದಲ್ಲಿ ತೊಡಗಿರುವ ಬಳೇಪೇಟೆ ಜಿಯಾವುಲ್ಲಾ
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇವಾಲಯದ ಬಳಿ ನಾಲು ಕಟ್ಟುವ ಕಾಯಕದಲ್ಲಿ ತೊಡಗಿರುವ ಬಳೇಪೇಟೆ ಜಿಯಾವುಲ್ಲಾ   

ಯಳಂದೂರು:ಗ್ರಾಮೀಣ ಭಾರತದಲ್ಲೀಗಹಲವಾರು ಜೀವನಾಧರಿತ ದೇಶಿ ಕಸುಬುಗಳು ನಶಿಸುತ್ತಿವೆ. ಹಸು, ಎತ್ತು, ಕರುಗಳಿಗೆ ಕಟ್ಟುತ್ತಿದ್ದ ಹಗ್ಗ, ಕೊಂಬು ಒರೆಯುವ ಕಲೆಗಳುನೇಪತ್ಯಕ್ಕೆ ಸೇರುತ್ತಿವೆ. ಈ ಸಾಲಿಗೆ ಈಗ ಎತ್ತುಗಳ ಗೊರಸುಗಳಿಗೆ ಲಾಳ ಹೊಡೆಯು ಕಲೆಯೂ ಸೇರ್ಪಡೆಯಾಗಿದೆ.

ತಾಲ್ಲೂಕು ಸೇರಿದಂತೆ ಗಡಿ ಜಿಲ್ಲೆಯಲ್ಲಿ ಎತ್ತುಗಳಿಗೆ ಲಾಳ ಹೊಡೆಯುವ ಕಾಯಕವನ್ನುನಂಬಿಕೊಂಡವರು ನೂರಾರು ಜನರಿದ್ದಾರೆ. ಕೃಷಿಯಲ್ಲಿ ಟ್ರಾಕ್ಟರ್, ಟಿಲ್ಲರ್ ಬಳಕೆಯಿಂದ ಎತ್ತುಗಳಿಗೆ ನಾಲು ಹಾಕಿ ಜೀವನೋಪಾಯ ಮಾಡುತ್ತಿದ್ದವರು ಈಗ ತೆರೆಮರೆಗೆಸರಿಯುತ್ತಿದ್ದಾರೆ.

ಆದರೆ, ಪಟ್ಟಣದ ಬಳೇಪೇಟೆಯ ಜಿಯಾವುಲ್ಲಾ ಸಾಹೇಬ್ ಅವರದ್ದು ಇದಕ್ಕೆ ಅಪವಾದ. ಅಪ್ಪನಿಂದ ಬಳುವಳಿಯಾಗಿ ಬಂದ ಲಾಳದ ಕಲೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಕೃಷಿಕರಜೀವಾಳವಾದ ಎತ್ತುಗಳನ್ನು ಮನೆ ಮಕ್ಕಳಂತೆ ಕಂಡು, ಅವುಗಳ ಒರಟಾದ ಕೊಳಗಗಳನ್ನು ತಿದ್ದಿತೀಡಿ, ಲಾಳ ಜೋಡಿಸಿ ಮೊಳೆ ಹೊಡಿಯುತ್ತಾರೆ. ರೈತರು ನೀಡುವ ಹಣದಿಂದ ಬದುಕಿನಬಂಡಿ ಕಟ್ಟಿಕೊಂಡಿದ್ದಾರೆ. ಸಾಕಷ್ಟು ಅನುಭವ ಮತ್ತು ತಾಳ್ಮೆ ಬೇಡುವ ಈ ನಾಲುಕಟ್ಟುವಿಕೆಯ ಕುಶಲಕರ್ಮಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ನೀಡಿಸನ್ಮಾನಿಸಿದೆ.

ADVERTISEMENT

‘ಅಬ್ಬಜಾನ್ ನಜೀರ್‌ಸಾಬ್‌ ಅವರು 60 ವರ್ಷಗಳಿಂದ ಈ ವೃತ್ತಿಯಲ್ಲಿ ಪರಿಣಿತರಾಗಿದ್ದರು. ಊರೂರುತಿರುಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಚಿಕ್ಕವನಾಗಿ ಇದ್ದಾಗಲೇ ಲಾಳಹೊಡೆಯುವುದನ್ನು ನೋಡುತ್ತ ಬೆಳೆದೆ. ಎತ್ತು, ಏರು ನಂಬಿದವರು ಉತ್ತುವ-ಬಿತ್ತುವ,ಗಾಡಿ ಎಳೆದು ದುಡಿಯುವ ಎತ್ತುಗಳ ಗೊರಸುಗಳಿಗೆ ಕಬ್ಬಿಣದ ಲಾಳವನ್ನು ಕಟ್ಟುತ್ತಿದ್ದರು. ಜಾನುವಾರುಗಳನ್ನು ಮೊಳೆ, ಮುಳ್ಳು-ಕಲ್ಲುಗಳಿಂದ ರಕ್ಷಿಸುವ ಜೊತೆ ಟಾರು ರಸ್ತೆಯಲ್ಲಿಕಾಲು ಜಾರದಂತೆ ಬಿಗಿಹಿಡಿಯುವಂತೆ ತಡೆಯಲು ಇವುಗಳನ್ನು ಕಟ್ಟುವಾಗ ತುಸುಸೂಕ್ಷ್ಮತೆಯನ್ನು ಪ್ರದರ್ಶಿಸಬೇಕಿತ್ತು. ಕೃಷಿಕರು ನಿಗದಿತ ಹಣ ಸಂದಾಯಮಾಡುತ್ತಿದ್ದರು. ಓದು ಬರಹ ತಲೆಗೆ ಹತ್ತದ ನಾನು ಅಪ್ಪನ ಹಾದಿಯಲ್ಲಿ ಮುಂದುವರಿದೆ.ನಂತರ ನಾಲು ಹೊಡೆಯುವುದರಲ್ಲಿ ಧನ್ಯತಾಭಾವ ಕಂಡುಕೊಂಡೆ' ಎನ್ನುತ್ತಾರೆ ಜಿಯಾವುಲ್ಲಾ.

‘ಲಾಳ ಕಟ್ಟುವುದು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದರೂ, ಎತ್ತುಗಳ ಕಾಲಿಗೆ ಗಾಯಗಳಾಗುವ ಸಂಭವ ಇದೆ.ಒಂದು ಬಾರಿ ಲಾಳ ಕಟ್ಟಿದ ನಂತರ ಎತ್ತುಗಳ ಕೆಲಸದ ಪ್ರಮಾಣ ಮತ್ತು ಅವು ವಾಸಿಸುತ್ತಿರುವಮಣ್ಣಿನ ರೀತಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮತ್ತೆ ಲಾಳ ಹಾಕಬೇಕು. ಆರಂಭದಲ್ಲಿಎತ್ತುಗಳನ್ನು ಅನುನಯದಿಂದ ಕೆಳಕ್ಕೆ ಕೆಡವಬೇಕು. ನಂತರ ಕಾಲುಗಳಿಗೆ ಹಗ್ಗ ಬಿಗಿಯಬೇಕು. ಇಬ್ಬರ ಸಹಾಯವೂ ಬೇಕು’ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ಇವರು.

‘ಮುಂಗಾರು ಹಂಗಾಮಿನ ಸಾಗುವಳಿಯಲ್ಲಿ ತೊಡಗುವ ಎತ್ತುಗಳಿಗೆ 3 ತಿಂಗಳ ನಂತರ ಲಾಳಬದಲಿಸಬೇಕು. ಗಾಡಿಗೆ ಎತ್ತುಗಳನ್ನು ಕಟ್ಟಿದರೆ ಒಂದೂವರೆ ತಿಂಗಳಿಗೆ ಮತ್ತೆಕಟ್ಟಿಸಬೇಕು. ಕೃಷಿಕರು ಎತ್ತು, ಹಸುಗಳ ಪಾದಗಳನ್ನು ಜತನದಿಂದ ನೋಡಿಕೊಂಡು, ಅವುಗಳಆರೋಗ್ಯವನ್ನು ಕಾಪಾಡಬೇಕು. ಇದರಿಂದ ಎತ್ತು ನಂಬಿದವರ ಜೀವನವೂ ಹಸನಾಗುತ್ತದೆ’ ಎಂದು ಕೃಷಿಕ ಕಂದಹಳ್ಳಿ ಗೋವಿಂದ ಅವರು ಹೇಳಿದರು.

ಒಂದೂವರೆ ಗಂಟೆ ಸಮಯಬೇಕು
‘ಲಾಳ ಕಟ್ಟಲು ಒಂದೂವರೆ ಗಂಟೆ ಸಮಯ ಬೇಕು. ಒಂದು ಜೊತೆ ಎತ್ತಿಗೆ 500 ಗ್ರಾಂ ಲಾಳಮತ್ತು 250 ಗ್ರಾಂ ಮೊಳೆ ಬೇಕು. ಇವುಗಳಿಗೆ ಕನಿಷ್ಠ ₹400 ಖರ್ಚಾಗುತ್ತದೆ. ನಂತರನಮ್ಮ ಕೂಲಿ ಸೇರಿ ಒಟ್ಟು ₹600 ಪಡೆಯುತ್ತೇವೆ. ಇತ್ತೀಚಿಗೆ ಎತ್ತುಗಳ ಸಂಖ್ಯೆ ಕಡಿಮೆಆಗುತ್ತಿದ್ದು, ಪರಂಪರೆಯಿಂದ ನಾಲು ಕಟ್ಟುತ್ತಿರುವ ಮಂದಿ ತಮ್ಮ ಕುಟುಂಬ ಸಾಕಲುಕಷ್ಟಪಡುತ್ತಿದ್ದಾರೆ. ಮುಂದಿನ ಪೀಳಿಗೆ ಈ ಕೆಲಸವನ್ನು ಇಷ್ಟಪಡುತ್ತಿಲ್ಲ. ಕಲಿಕೆಯತ್ತಚಿತ್ತ ಹರಿಸಿದ್ದಾರೆ’ ಎಂದು 35 ವರ್ಷಗಳ ತಮ್ಮ ಅನುಭವನ್ನು ಜಿಯಾವುಲ್ಲಾ ಅವರು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.