ಚಾಮರಾಜನಗರ: ಸ್ನಾತಕೋತ್ತರ ಪದವಿಯಲ್ಲಿ ಸಮಾಜ ಸೇವೆ (ಎಂಎಸ್ಡಬ್ಲ್ಯು) ವ್ಯಾಸಂಗ ಪಡೆದಿದ್ದ ಏಳು ಜನರು ಸ್ನೇಹಿತರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ 2002ರಲ್ಲಿ ಆರಂಭಿಸಿದ್ದ ಸಾಧನಾ ಸಂಸ್ಥೆ ಮಕ್ಕಳ ರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
ಮಕ್ಕಳ ರಕ್ಷಣೆ ಮಾತ್ರವಲ್ಲದೆ ಮಹಿಳಾ ಸಬಲೀಕರಣ, ಆರೋಗ್ಯ ಹಾಗೂ ಪರಿಸರ ಕ್ಷೇತ್ರದಲ್ಲಿಕೆಲಸ ಮಾಡುತ್ತಿದೆ. ಚಾಮರಾಜನಗರ ಮಾತ್ರವಲ್ಲದೇ ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದಲ್ಲೂ ಸಾಧನಾ ಸಂಸ್ಥೆ ಸಕ್ರಿಯವಾಗಿದೆ.
ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ಮಕ್ಕಳ ಸಹಾಯವಾಣಿಯನ್ನು (1098) ಸಾಧನಾ ಸಂಸ್ಥೆ ನಿರ್ವಹಿಸುತ್ತಿದೆ. ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಬಾಲ ಕಾರ್ಮಿಕರು, ಭಿಕ್ಷೆ ಬೇಡುವ ಮಕ್ಕಳ ರಕ್ಷಣೆ, ಶಾಲಾ ಮಕ್ಕಳಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳ ಬಗ್ಗೆ ಅರಿವುದು ಮೂಡಿಸುವುದು ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರದ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಾಡುತ್ತಾ ಬಂದಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಮತ್ತೆ ಶಾಲೆಗೆ ದಾಖಲಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. 2009–11ರ ಅವಧಿಯಲ್ಲಿ ಐಎಲ್ಒ ಎಂಬ ಸಂಸ್ಥೆಯೊಂದಿಗೆ ಸೇರಿ ಚಾಮರಾಜನಗರ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಬಾಲ ಕಾರ್ಮಿಕ ಸೇತುಬಂಧ ಶಾಲೆಗಳನ್ನು ತೆರೆದು, ಬಾಲ ಕಾರ್ಮಿರಾಗಿದ್ದವರನ್ನು ರಕ್ಷಿಸಿ ಅವರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತಂದ ಹೆಗ್ಗಳಿಕೆ ಸಾಧನಾ ಸಂಸ್ಥೆಯದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.