ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೇಬಿನ ಕೋಬೆ ಹಾಡಿಯಲ್ಲಿ ಗಿರಿಜನರಿಗೆ ಆಹಾರದ ಸಮಸ್ಯೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಸ್ಪಷ್ಟಪಡಿಸಿದರು.
ಸ್ಥಳೀಯ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸೇಬಿನ ಕೋಬೆ ಹಾಗೂ ಜೀರಿಗೆ ಗದ್ದೆ ಹಾಡಿಗಳಿಗೆ ಭೇಟಿ ನೀಡಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ ನೋಡಿ ಎರಡು ಹಾಡಿಗಳಿಗೆ ಭೇಟಿ ನೀಡಿದ್ದೇನೆ.ಅಂತ್ಯೋದಯ ಪಡಿತರ ಚೀಟಿಗಳಿಗೆ ಎಷ್ಟು ಅಕ್ಕಿ, ರಾಗಿ ಬಂದಿದೆ? ಗಿರಿಜನರಿಗೆ ಇಲಾಖೆ ವತಿಯಿಂದ ನೀಡಲಾಗುವ ಪೌಷ್ಟಿಕ ಆಹಾರ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ. ಹಾಡಿಗಳಿಗೆ ಆಹಾರ ಪೂರೈಕೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿರುವ ಬಂದಿರುವ ವಿಡಿಯೊ ಸುಳ್ಳು ಎಂದು ಅಲ್ಲಿನ ನಿವಾಸಿಗಳೇ ಹೇಳಿದ್ದಾರೆ. ವಿಡಿಯೊದಲ್ಲಿ ಮಾತನಾಡಿರುವ ಮಹಿಳೆಯ ಜೊತೆಯಲ್ಲೂ ಮಾತನಾಡಿದ್ದೇನೆ. ‘ಆ ರೀತಿ ಮಾತನಾಡುವುದಕ್ಕೆ ಹೇಳಿದರು’ ಎಂದು ಆಕೆ ಹೇಳಿದರು’ ಎಂದು ತಿಳಿಸಿದರು.
‘ಸಾಮಾಜಿಕ ಜಾಲತಾಣದಲ್ಲಿ ಸತ್ಯಕ್ಕೆ ಹತ್ತಿರವಾದ ಸಂದೇಶಗಳನ್ನು ಹಂಚಿಕೊಳ್ಳಬೇಕು. ಸತ್ಯಕ್ಕೆ ದೂರವಾದ ಸಂಗತಿಗಳನ್ನು ಯಾರೂ ಹಂಚಿಕೊಳ್ಳಬಾರದು. ಇದರಿಂದ ಜಿಲ್ಲೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಕೆಲಸ ಮಾಡುತ್ತಿರುವವರಿಗೆ ಬೇಸರವಾಗುತ್ತದೆ’ ಎಂದರು.
ಲಸಿಕೆ ಅಭಿಯಾನ: ‘ಹಾಡಿಗಳ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ಲಸಿಕೆ ಹಾಕಿಸುವಂತೆ ಮಾಡಲು ಅಭಿಯಾನ ಆರಂಭಿಸುವುದಾಗಿ ಶಾಸಕರು ಹೇಳಿದ್ದಾರೆ. ಶೀಘ್ರದಲ್ಲಿ ಅಭಿಯಾನ ಆರಂಭವಾಗಲಿದೆ’ ಎಂದರು.
6ನೇ ತಾರೀಖಿನ ನಂತರ ನಿರ್ಧಾರ:ರಾಜ್ಯದಲ್ಲಿರುವ ಲಾಕ್ಡೌನ್ 7ನೇ ತಾರೀಖಿಗೆ ಮುಗಿಯುತ್ತದೆಯೇ ಎಂದು ಜನರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ಇದೇ 6ರಂದು ಮುಖ್ಯಮಂತ್ರಿ ಅವರು ಸಭೆ ನಡೆಸಿ ಲಾಕ್ ಡೌನ್ ಮುಂದುವರೆಸಬೇಕೋ, ಬೇಡವೋ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.