ADVERTISEMENT

ಎಸ್‌ಸಿ ಸಮುದಾಯದ ರೈತರ ಸಮಸ್ಯೆಗಳಿಗೆ ಸಿಗದ ಸ್ಪಂದನೆ: ದಲಿತ ಮುಖಂಡ ಆರೋಪ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:11 IST
Last Updated 20 ಅಕ್ಟೋಬರ್ 2024, 14:11 IST
ಚಾಮರಾಜನಗರ ತಾಲೂಕಿನ ದಡದಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳ ಯಜಮಾನರು, ಮುಖಂಡರ ಪೂರ್ವಭಾವಿ ಸಭೆ ನಡೆಯಿತು
ಚಾಮರಾಜನಗರ ತಾಲೂಕಿನ ದಡದಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳ ಯಜಮಾನರು, ಮುಖಂಡರ ಪೂರ್ವಭಾವಿ ಸಭೆ ನಡೆಯಿತು   

ಚಾಮರಾಜನಗರ: ಪರಿಶಿಷ್ಟ ಜಾತಿಯ ರೈತರ ಸಮಸ್ಯೆಗಳು ಬಗೆಹರಿಯಬೇಕಾದರೆ, ಸರ್ಕಾರದ ಯೋಜನೆಗಳು ತಲುಪಬೇಕಾದರೆ ಪ್ರತ್ಯೇಕ ಸಂಘಟನೆ ರಚನೆ ಅತ್ಯಗತ್ಯವಾಗಿದ್ದು, ಕರ್ನಾಟಕ ಪರಿಶಿಷ್ಟ ಜಾತಿ ರೈತ ಸಂಘ ನಿರ್ಮಾಣ ಮಾಡಲು ತಾಲ್ಲೂಕಿನ ದಡದಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಪರಿಶಿಷ್ಟ ಜಾತಿಯ ರೈತ ಮುಖಂಡರು ತೆಗೆದುಕೊಂಡರು.

ಸಭೆಯಲ್ಲಿ ಮಾತನಾಡಿದ ಮುಖಂಡರಾದ ಸಿದ್ದಯ್ಯನಪುರ ಗೋವಿಂದರಾಜು, ಪರಿಶಿಷ್ಟ ಜಾತಿಗೆ ಸೇರಿದ ರೈತರ ಸಮಸ್ಯೆಯನ್ನು ಪ್ರಸ್ತುತ ಅಸ್ತಿತ್ವದಲ್ಲಿ ಇರುವ ರೈತ ಸಂಘ ಆಲಿಸುತ್ತಿಲ್ಲ. ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅವಕಾಶಗಳನ್ನೂ ನೀಡುತ್ತಿಲ್ಲ. ಪರಿಶಿಷ್ಟ ಜಾತಿ ರೈತರ ಸಮಸ್ಯೆಗಳು ಬಹಳಷ್ಟಿದ್ದರೂ ಬಗೆಹರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಯ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯುವಲ್ಲಿ ರೈತ ಸಂಘ ವಿಫಲವಾಗಿದೆ. ಪರಿಶಿಷ್ಟ ಜಾತಿ ರೈತ ಸಂಘ ರಚನೆ ಮಾಡಿಕೊಂಡು ಸಂಘಟನಾತ್ಮಕ ಹೋರಾಟ ಆರಂಭಿಸಿದರೆ ಸಮುದಾಯದ ರೈತರಿಗೆ ನ್ಯಾಯ ಸಿಗಲಿದೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ಜೊತೆಗೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ನೀಡಬೇಕಿದೆ ಎಂದರು.

ADVERTISEMENT

ಪರಿಶಿಷ್ಟ ಜಾತಿ ರೈತ ಸಂಘವನ್ನು ಅಸ್ತಿತ್ವಕ್ಕೆ ತರುವುದು ಸೂಕ್ತ. ಚಂದಕವಾಡಿ ಭಾಗದ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಂದ ಆಗಮಿಸಿರುವ ರೈತರು ಸಲಹೆ ಸೂಚನೆಗಳನ್ನು ನೀಡಿ, ಸಂಘ ರಚನೆಗೆ ಸಂಪೂರ್ಣ ಬೆಂಬಲ ಹಾಗು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಿದ್ದಯ್ಯನಪುರ ಗ್ರಾಮದ ನಾಗರಾಜು ಮಾತನಾಡಿ, ರೈತರಿಗೆ ಜಾತಿ ಇಲ್ಲ, ಆದರೂ ಈಚೆಗೆ ಪರಿಶಿಷ್ಟ ಜಾತಿಯ ರೈತರಿಗೆ ಆಗುತ್ತಿರುವ ಅನ್ಯಾಯಗಳು ಮತ್ತು ರೈತ ಸಂಘಗಳು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಬೇಸರವಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಚಂದಕವಾಡಿ ಭಾಗದಲ್ಲಿ ಪರಿಶಿಷ್ಟ ಜಾತಿ ರೈತ ಸಂಘವನ್ನು ರಚನೆ ಮಾಡಿ, ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸೋಣ. ಹಕ್ಕು ಪಡೆಯಲು ಹೋರಾಟ ಮಾಡೋಣ. ಪರಿಶಿಷ್ಟ ಜಾತಿ ರೈತ ಸಂಘ ರಚನೆಗೆ ಸಿದ್ದಯ್ಯನಪುರ ಗ್ರಾಮಸ್ಥರ ಸಂಪೂರ್ಣ ಬೆಂಬಲ ಇದೆ ಎಂದರು.

ರೈತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಸಭೆಗೆ ಬಂದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಸಭೆ ಕರೆದು ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಅ. 26ರಂದು ಚಂದಕವಾಡಿಯಲ್ಲಿ ಸಭೆ: ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ರಚನೆ ಕುರಿತು ಅ. 26ರಂದು ಚಂದಕವಾಡಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರಮುಖರ ಸಭೆ ಆಯೋಜನೆ ಮಾಡಲಾಗಿದ್ದು ಎಲ್ಲರೂ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಡಾ.ಕೆ.ಶಿವಕುಮಾರ್ ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಆಲೂರು ಮಲ್ಲಣ್ಣ, ದಡದಹಳ್ಳಿ ಗೋವಿಂದರಾಜು, ಮಹದೇವಸ್ವಾಮಿ, ಮಹೇಶ್, ಕೆಂಪಣ್ಣ, ಶಿವಣ್ಣ, ಸಿ.ಎಸ್. ಮಹದೇವಸ್ವಾಮಿ, ಯ. ನಾಗರಾಜು, ಸೋಮಣ್ಣ, ಬಸವಣ್ಣ, ಶಿವಬಸಯ್ಯ, ಮಹದೇವಸ್ವಾಮಿ, ರಂಗಸ್ವಾಮಿ, ಪ್ರಭುಸ್ವಾಮಿ, ಕುಂಬಯ್ಯ, ನಾಗರಾಜು, ಮುದ್ದಮಲ್ಲಯ್ಯ, ಎಸ್.ಆರ್. ಗೋವಿಂದರಾಜು, ಕುಂಬೇಶ್ವರ ಸ್ವಾಮಿ, ಹೆಬ್ಬಸೂರು ಸೋಮಣ್ಣ, ಮರಿಸ್ವಾಮಿ, ಗೌತಮ ಕಾಲೋನಿಯ ಗುರುಸ್ವಾಮಿ, ಮಹದೇವಯ್ಯ, ಮಹದೇವಸ್ವಾಮಿ, ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.