ಚಾಮರಾಜನಗರ: ಹನೂರು ತಾಲ್ಲೂಕಿನಲ್ಲಿ ಬರುವ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜನೆಗೆ ಸೇರ್ಪಡೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಹೇಳಿದರು.
ನಗರದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಈ ವಿಚಾರದಲ್ಲಿ ನನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದೇನೆ. ಹುಲಿ ಸಂರಕ್ಷಿತ ಪ್ರದೇಶ ಆಗುವುದಕ್ಕೆ ಅವಕಾಶ ಕೊಡುವುದಿಲ್ಲ. ಆ ಭಾಗದಲ್ಲಿ ಸಾವಿರಾರು ಜನರು ಹಗಲು ರಾತ್ರಿ ಓಡಾಡುತ್ತಾರೆ. ಎಲ್ಲರಿಗೂ ತೊಂದರೆಯಾಗಲಿದೆ’ ಎಂದರು.
ಹುಲಿಗಳ ಸ್ಥಳಾಂತರ ಮಾಡಿ: ಸ್ಥಳೀಯ ಶಾಸಕ ಆರ್.ನರೇಂದ್ರ ಅವರು ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ‘10–12 ಹುಲಿಗಳಿಗಾಗಿ ಅರಣ್ಯ ವ್ಯಾಪ್ತಿಯಲ್ಲಿರುವ 15 ಸಾವಿರ ಜನರಿಗೆ, ಮಹದೇಶ್ವರ ಸ್ವಾಮಿಯ ಲಕ್ಷಾಂತರ ಭಕ್ತರಿಗೆ ತೊಂದರೆ ಕೊಡುವುದು. ಆ 12 ಹುಲಿಗಳನ್ನು ಸೆರೆ ಹಿಡಿದು ಜಿಲ್ಲೆಯಲ್ಲೇ ಇರುವ ಬಂಡೀಪುರ ಹಾಗೂ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಬಿಡಬಹುದಲ್ಲವೇ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.